ಬೆಂಗಳೂರು: ಮೂರು ತಿಂಗಳ ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ಆಂಬುಲೆನ್ಸ್ ನೌಕರರು ಇಂದು(ಮೇ 6) ರಾತ್ರಿ 8ರಿಂದ ರಾಜ್ಯಾದ್ಯಂತ ಆಂಬುಲೆನ್ಸ್ ಸೇವೆ ಸ್ಥಗಿತಗೊಳಿಸಲು ನೌಕರರ ಸಂಘ ನಿರ್ಧರಿಸಿದೆ.
108 ಆಯಂಬುಲೆನ್ಸ್ ಸೇವೆಯ ಉಸ್ತುವಾರಿ ವಹಿಸಿಕೊಂಡ ಜಿವಿಕೆ ಸಂಸ್ಥೆಯು 2023ರ ಡಿಸೆಂಬರ್ನಿಂದ ಎಪ್ರಿಲ್ ವರೆಗಿನ ವೇತನವನ್ನು ಬಾಕಿ ಇರಿಸಿಕೊಂಡಿದೆ.ಈ ನಡುವೆ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿದಾಗ ಡಿಸೆಂಬರ್ ಹಾಗೂ ಜನವರಿ ತಿಂಗಳಿನ ಒಟ್ಟು ಮೊತ್ತದ ಅರ್ಧದಷ್ಟು ವೇತನ ಪಾವತಿಸಿದೆ. ಇನ್ನೂ 3 ತಿಂಗಳ ಪೂರ್ಣ ವೇತನ ಬಾಕಿಯಿದೆ ಎಂದು 108 ಆಂಬುಲೆನ್ಸ್ ನೌಕರ ಸಂಘದ ಉಪಾಧ್ಯಕ್ಷ ಪರಮಶಿವಯ್ಯ ತಿಳಿಸಿದರು.
ವೇತನವನ್ನು ನಂಬಿರುವ ನೌಕರರು ಸಂಕಷ್ಟದಲ್ಲಿದ್ದಾರೆ. ಸಾಕಷ್ಟು ಬಾರಿ ವೇತನ ಬಿಡುಗಡೆ ಮಾಡಲು ಮನವಿ ಮಾಡಿದರೂ ಸ್ಪಂದಿಸಿಲ್ಲ. ಹೀಅಗಾಗಿ ಸೋಮವಾರ ರಾತ್ರಿ 8 ಗಂಟೆಯೊಳೆಗೆ ಬಾಕಿಯಿರುವ ವೇತನ ಬಿಡುಗಡೆ ಮಾಡಬೇಕು. ಒಂದು ವೇಳೆ ವೇತನ ಸಿಗದಿದ್ದರೆ ರಾಜ್ಯಾದ್ಯಂತ ಸೇವೆಯನ್ನು ಸ್ಥಗಿತಗೊಳಿಸುತ್ತೇವೆ ಎಂದು ನೌಕರರ ಸಂಘ ತಿಳಿಸಿದೆ.
ಆಂಬುಲೆನ್ಸ್ ಸ್ಥಗಿತದಿಂದ ಆಗುವ ಅನಾಹುತಗಳಿಗೆ ಜಿವಿಕೆ ಸಂಸ್ಥೆ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು. ಸರಕಾರಿ ವ್ಯವಸ್ಥೆಯಡಿ ರಾಜ್ಯಾದ್ಯಂತ 715ಕ್ಕೂ ಅಧಿಕ ಆಂಬುಲೆನ್ಸ್ ಕಾರ್ಯಾಚರಿಸುತ್ತಿದೆ. ಇದರಲ್ಲಿ ಡ್ರೈವರ್ ಹಾಗೂ ಸಹಾಯಕ ಸಿಬಂದಿ ಸಹಿತ 3000 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.