ಬೆಳಗಾವಿ: ಕರಾವಳಿವಲಯ ಹೊರತುಪಡಿಸಿ ನದಿ ಪಾತ್ರಗಳ ವ್ಯಾಪ್ತಿಯಲ್ಲಿ ಟೆಂಡರ್ ಮತ್ತು ಹರಾಜು ಮೂಲಕ ಮರಳು ಗುತ್ತಿಗೆ ನೀಡಲಾಗುವುದು. ಇನ್ನೂ ಕರಾವಳಿ ಜಿಲ್ಲೆಗಳ ಮರಳು ಸಮಸ್ಯೆಗೆ ಶೀಘ್ರ ಪರಿಹಾರ ಸೂತ್ರ ರೂಪಿಸುವುದಾಗಿ ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪ ವೇಳೆ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಪ್ರಶ್ನೆಗೆ ಉತ್ತರಿಸಿ, ನದಿ ಪಾತ್ರಗಳ ವ್ಯಾಪ್ತಿಯಲ್ಲಿ ಟೆಂಡರ್ ಮತ್ತು ಹರಾಜು ಮೂಲಕ ಮರಳು ಗುತ್ತಿಗೆ ನೀಡಲಾಗುವುದು. ಇಲ್ಲಿ ಮರಳು ಗಣಿಗಾರಿಕೆ ನಡೆಸಿ ಮರಳನ್ನು ಸಾರ್ವಜನಿಕ ಮತ್ತು ಸರಕಾರಿ ಕಾಮಗಾರಿಗಳಿಗೆ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.
ಇದಕ್ಕೆ ವೇದವ್ಯಾಸ ಕಾಮತ್, ಕರಾವಳಿಯಲ್ಲಿ ಮರಳು ಗಣಿಗಾರಿಕೆ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಬೇಕು. ಮರಳು ಸಾಗಾಟ ಮತ್ತು ತೆಗೆಯಲು ನಿರಾಕ್ಷೇಪಣಾ ಪತ್ರ ನೀಡಬೇಕು ಎಂದರು. ಇತರ ಪಕ್ಷಗಳ ಸದಸ್ಯರು ಮರಳು ಸಮಸ್ಯೆಗೆ ಶೀಘ್ರ ಪರಿಹಾರ ನೀಡಿ ಎಂದು ಒತ್ತಾಯಿಸಿದರು.