ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಹಸೀಲ್ದಾರ್ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದ್ದು, ಲಂಚ ಸ್ವೀಕರಿಸುತ್ತಿದ್ದಾಗಲೇ ತಹಶೀಲ್ದಾರ್ ಸಂಗಮೇಶ ಜಿಡಗಾರನ್ನು ವಶಕ್ಕೆ ಪಡೆಯಲಾಗಿದೆ.
ಜಮೀನು ಪಾಲು ಮಾಡುವುದಕ್ಕೆ ತಹಶೀಲ್ದಾರ್ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ದೊಡ್ಡ ಬನ್ನಪ್ಪ ಅವರಿಂದ 5 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಎಸಿಬಿ ಎಸ್ ಪಿ ಮಹೇಶ್ ಮೇಘಣ್ಣವರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಡಿವೈಎಸ್ ಪಿ ಉಮಾಶಂಕರ್, ಪಿಎಸ್ ಐ ಗುರುಪಾದ್ ಬಿರಾದಾರ, ಸಿಬ್ಬಂದಿ ಅಮರ್, ವಿಜಯ್, ಗುತ್ತಪ್ಪ ದಾಳಿಯಲ್ಲಿ ಪಾಲ್ಗೊಂಡಿದ್ದರು.



