ಶಿವಮೊಗ್ಗ: ಚಂದ್ರಗುತ್ತಿಯ ಶ್ರೀ ರೇಣುಕಾಂಬ ಜಾತ್ರಾ ಮಹೋತ್ಸವ ಕಾರ್ಯಗಳಲ್ಲಿ ಹೊರಗಿನ ಭಕ್ತರ ಪ್ರವೇಶಕ್ಕೆ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಆದೇಶಿಸಿದ್ದಾರೆ.
ಸರ್ಕಾರದ ಮಾರ್ಗಸೂಚಿ ಹಾಗೂ ಕೆಲವು ಷರತ್ತುಗಳನ್ನು ಅನುಸರಿಸಿ ಮಾರ್ಚ್ 24ರವರೆಗೆ ಜಾತ್ರೆ ಅಂಗವಾಗಿ ನಡೆಯುವ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ಸ್ಥಳೀಯರಿಂದ ನಿರ್ವಹಿಸಲು ಅವರು ಅನುಮತಿ ನೀಡಿದ್ದಾರೆ.
ಜಾತ್ರಾ ಪ್ರದೇಶದಲ್ಲಿ ರಸ್ತೆ ಬದಿಗಳಲ್ಲಿ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅವಕಾಶವಿರುವುದಿಲ್ಲ. ರಥೋತ್ಸವಕ್ಕೆ ಸಂಬಂಧಿಸಿದಂತೆ ಗ್ರಾಮಕ್ಕೆ ಆಗಮಿಸುವ ಎಲ್ಲಾ ವಾಹನಗಳನ್ನು ನಿಗದಿಪಡಿಸಿದ ಚೆಕ್ಪೋಸ್ಟ್ ಗಳಲ್ಲಿ ತಡೆದು ಹಿಂದಕ್ಕೆ ಕಳುಹಿಸಬೇಕು. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಅಡಿ ಕ್ರಮ ಜರುಗಿಸಲಾಗುವುದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.



