ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ವಾಕ್ಸಮರ ಮುಂದುವರೆದಿದ್ದು, ಇಂದು ಒಬ್ಬರನ್ನೊಬ್ಬರು ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ನೀವು (ಯತ್ನಾಳ್ ) ಉತ್ತರ ಕರ್ನಾಟಕದವರು ಆದ್ರೆ, ನಾನು ಹೊನ್ನಾಳಿಯ ಮಧ್ಯ ಕರ್ನಾಟಕ ಭಾಗದವನು. ಉತ್ತರ ಕರ್ನಾಟಕವನ್ನು ಗೌರವಿಸುತ್ತೇನೆ. ನಾನು ಹೊನ್ನಾಳಿಯ ಅಂಜದ ಗಂಡು. ವಿನಃ ಕಾರಣ ಪಕ್ಷ, ನಾಯಕರ ಬಗ್ಗೆ ಮಾತನಾಡಬಾರದು. ಪಕ್ಷ ತಾಯಿ ಸಮಾನ. ನಾನು ತಾಯಿಯನ್ನು ಗೌರವಿಸುತ್ತೇನೆ. ಯಡಿಯೂರಪ್ಪ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಹೋರಾಟದಿಂದಲೇ ಬಂದು ಈಗ ಮುಖ್ಯಮಂತ್ರಿ ಆಗಿದ್ದಾರೆ. ಹಾಗೆಂದು ಯಡಿಯೂರಪ್ಪ ಪರವಾಗಿಯೂ ಬ್ಯಾಟಿಂಗ್ ಮಾಡುತ್ತಿಲ್ಲ. ಯಡಿಯೂರಪ್ಪ ಅವರನ್ನು ಸಮರ್ಥನೆ ಮಾಡಿಕೊಳ್ಳದೆ ಕುಮಾರಸ್ವಾಮಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಎಂದರು.
ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ. ನಾನು ಮಂತ್ರಿಯಾಗಿದ್ದಾಗ ಸಾಕಷ್ಟು ಕೆಲಸ ಮಾಡಿದ್ದೇನೆ. ಯಾರಿಗೂ ಹೆದರಲ್ಲ. ಯಾರನ್ನೂ ಹೆದರಿಸಿಲ್ಲ. ಹೊನ್ನಾಳಿಯ ಹೊಡೆತ ಇಡೀ ರಾಜ್ಯಕ್ಕೆ ಗೊತ್ತು. ವರ್ಷಕ್ಕೆ ಎರಡು ಬಾರಿ ಕುಸ್ತಿ ನಡೆಯುತ್ತದೆ. ಅದೂ ದೊಡ್ಡಮಟ್ಟದಲ್ಲಿ ನಡೆಯುತ್ತದೆ ಎಂದು ಕುಟುಕಿದರು.
ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್, ನಾನು ಯಾವುದಕ್ಕೂ ಅಂಜುವ ಮಗ ಅಲ್ಲ. ನಾನು ಉತ್ತರ ಕರ್ನಾಟಕದವನು. ಅಭಿವೃದ್ಧಿ ಪರ ನನ್ನ ಧ್ವನಿ. ಅದನ್ನು ಯಾರೂ ನಿಲ್ಲಿಸಲು ಯಾರಿಂದಲೂ ಆಗುವುದಿಲ್ಲ. ಯಾವಾಗ ಬಾಣ ಬಿಡಬೇಕು, ಯಾವಾಗ ಮೌನವಾಗಿರಬೇಕು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.
‘ಯಡಿಯೂರಪ್ಪ ಸಭೆಯಲ್ಲಿ ಒಬ್ಬರೇ ಶಾಸಕರು ಗಲಾಟೆ ಮಾಡಿದ್ದು ಎಂದು ಗೋವಿಂದ ಕಾರಜೋಳ ಹೇಳಿದ್ದು ಸತ್ಯ. ಮೊನ್ನೆ ಶಾಸಕರ ಸಭೆಯಲ್ಲಿ ಕೂಡ ಒಬ್ಬನೇ ಗಲಾಟೆ ಮಾಡಿದ್ದು. ಉಳಿದ ಶಾಸಕರು ಎಲ್ಲರೂ ಸುಮ್ಮನಿದ್ದರು. ಹಾದಿಬೀದಿಯಲಿ ಕೆಲವರು ಹೇಳಿಕೆ ಕೊಡುತ್ತಿದ್ದಾರೆ. ಯಡಿಯೂರಪ್ಪ ಮನೆಗೆ ನಾನು ಮಂತ್ರಿ ಸಲುವಾಗಿ ಎಂದೂ ಹೋಗಿಲ್ಲ. ಜನರ ಭಾವನೆಗಳನ್ನು ಹೇಳುವ ಕೆಲಸ ಮಾಡಿದ್ದೇನೆ. ನಾನು ಕ್ಷಮೆ ಯಾಚಿಸಿದ್ದೇನೆ ಅಂತ ಹೇಳೋನು ನಾನಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ನಾನು ಮಾತನಾಡುತ್ತೇನೆ. ಜನಪರ ವಿಚಾರಗಳನ್ನೇ ನಾನು ಮಾತನಾಡಿದ್ದೇನೆ. ಸರ್ಕಾರ ತಪ್ಪು ಮಾಡಿದಾಗ ನಾನು ಎಚ್ಚರಿಸಿದ್ದೇನೆ. ಅದು ಪಕ್ಷ ವಿರೋಧಿ ಕೆಲಸ ಅಲ್ಲ. ನಾನು ಮಾತನಾಡುವಾಗ ಯಾರೂ ಖಂಡಿಸಿಲ್ಲ. ಒಬ್ಬರೇ ಒಬ್ಬರು ಗಲಾಟೆ ಮಾಡಿದರು, ಬಿಟ್ಟರೆ ಬೇರೆ ಯಾರೂ ನನಗೆ ವಿರೋಧ ಮಾಡಲಿಲ್ಲ. ಅಂದರೆ, ಉಳಿದ ಶಾಸಕರಿಗೂ ನಾನು ಹೇಳಿದ್ದು ಸಹಮತ ಇದೆ ಅಂತ ಅರ್ಥ‘ ಎಂದು ಹೇಳಿದರು.
ಸಚಿವರಾಗಬೇಕು ಎಂದು ಒಬ್ಬರು ಅತಿ ನಿಷ್ಠೆ ತೋರಿಸಿದ್ದಾರೆ. ಮುಖ್ಯಮಂತ್ರಿ ಆಗಬೇಕು ಅಂತ ಕೆಲವರಿಗೆ ಇರಬಹುದು. ಯಡಿಯೂರಪ್ಪಗೆ ನಾನು ಮಾತಾಡಿದಾಗ ಬೇಜಾರಾಯ್ತೋ ಇಲ್ಲೋ ನನಗೆ ಗೊತ್ತಿಲ್ಲ. ನನ್ನ ಮೇಲೆ ಇನ್ನೂ ಶಿಸ್ತು ಸಮಿತಿಗೆ ಶಿಫಾರಸು ಆಗಿಲ್ಲ. ಮಾಧ್ಯಮದವರಿಗೆ ಎಲ್ಲಿಂದಲೋ ಸೂಚನೆ ಬರುತ್ತದೆ. ಶಿವಾನಂದ ಸರ್ಕಲ್ ಅಕ್ಕಪಕ್ಕ ಇದ್ದವರಿಂದ ಸೂಚನೆ ಬರತ್ತದೆ. ಬೆಳಿಗ್ಗೆ ಯತ್ನಾಳ್ ಸರಿಯಾಗಿ ಹೇಳಿದ್ದಾರೆ ಅಂತೀರಿ. ಸಂಜೆ ನಾಲಿಗೆ ಹರಿಬಿಟ್ಟ ಯತ್ನಾಳ್ ಅಂತ ಹಾಕ್ತೀರಿ. ಸಂಜೆ ಆ ಹುಲಿ ಈ ಹುಲಿ ಅಂತ ಹೇಳ್ತೀರಿ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.



