ಬೆಂಗಳೂರು: ಇಂದು ಸಂಜೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ನಡೆಯಲಿದ್ದು, . ಈಗಾಗಲೇ 7 ಶಾಸಕರು ನೂರನ ಸಚಿವರಾಗಲಿದ್ದಾರೆ. ಹಾಲಿ ಸಚಿವ ಹೆಚ್. ನಾಗೇಶ್ ಅವರನ್ನು ಸಂಪುಟದಿಂದ ಕೈ ಬಿಡಲು ನಿರ್ಧರಿಸಲಾಗಿದೆ. ಇಂದು ತುರ್ತಾಗಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಭೆಯಲ್ಲಿ ಹೆಚ್. ನಾಗೇಶ್ ಅವರ ಮನವೊಲಿಕೆ ಮಾಡಿದ್ದು, ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ. ಹೆಚ್. ನಾಗೇಶ್ ಅವರಿಗೆ ಭಾರೀ ನಿರಾಸೆಯೊಂದಿಗೆ ಸಿಎಂ ಮಾತಿಗೆ ಬೆಲೆ ಕೊಟ್ಟು ರಾಜೀನಾಮೆಗೆ ಮುಂದಾಗಿದ್ದಾರೆ.
ಈಗಾಗಲೇ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಆರ್. ಶಂಕರ್, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಸಿ.ಪಿ. ಯೋಗೇಶ್ವರ್, ಎಸ್. ಅಂಗಾರ ಅವರ ಹೆಸರನ್ನು ಸಚಿವ ಸಂಪುಟಕ್ಕೆ ಅಂತಿಮಗೊಳಿಸಲಾಗಿದೆ. ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದ ಹೆಚ್. ವಿಶ್ವನಾಥ್ ಹಾಗೂ ಮುನಿರತ್ನ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ. ಹಾಲಿ ಅಬಕಾರಿ ಸಚಿವರಾಗಿರುವ ಹೆಚ್. ನಾಗೇಶ್ ಅವರನ್ನು ಕೂಡ ಸಂಪುಟದಿಂದ ಕೈ ಬಿಡಲು ತೀರ್ಮಾನಿಸಲಾಗಿದೆ.
ಸಂಪುಟ ಸಭೆಗೂ ಮುನ್ನ ವಿಧಾನಸೌಧದಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ, ಯಡಿಯೂರಪ್ಪನವರ ಮನವೊಲಿಸಲು ಸಚಿವ ಹೆಚ್. ನಾಗೇಶ್ ಮುಂದಾಗಿದ್ದರು. ಆದರೆ, ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಲು ಹೆಚ್. ನಾಗೇಶ್ಗೆ ಸಾಧ್ಯವಾಗಿರಲಿಲ್ಲ. ಸಿಎಂ ರಾಜೀನಾಮೆಗೆ ಸೂಚಿಸಿದ ನಂತರ ತೀವ್ರ ಬೇಸರದಿಂದಲೇ ಕ್ಯಾಬಿನೆಟ್ನಿಂದ ಹೊರಬಂದ ಹೆಚ್. ನಾಗೇಶ್ ಅವರ ಪರವಾಗಿ ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್, ಗೋಪಾಲಯ್ಯ, ನಾರಾಯಣ ಗೌಡ ನಿಂತರು. ಆದರೂ ಸಿಎಂ ಯಡಿಯೂರಪ್ಪ ತಮ್ಮ ನಿಲುವನ್ನು ಬದಲಾಯಿಸಲಿಲ್ಲ.
ತಮ್ಮನ್ನು ಯಾವುದೇ ಕಾರಣಕ್ಕೂ ಸಂಪುಟದಿಂದ ಕೈ ಬಿಡುವುದಿಲ್ಲ ಎಂದು ನಿನ್ನೆ ಸುದ್ದಿಗೋಷ್ಠಿ ನಡೆಸಿ ವಿಶ್ವಾಸ ವ್ಯಕ್ತಪಡಿಸಿದ್ದ ಸಚಿವ ಹೆಚ್. ನಾಗೇಶ್ ಅವರಿಗೆ ಸಿಎಂ ಯಡಿಯೂರಪ್ಪನವರ ನಿರ್ಧಾರದಿಂದ ಭಾರೀ ಆಘಾತ ಉಂಟಾಗಿದೆ. ಬಿಜೆಪಿ ಸರ್ಕಾರ ರಚನೆಗೆ ನನ್ನಿಂದಲೇ ಟರ್ನಿಂಗ್ ಪಾಯಿಂಟ್ ಸಿಕ್ಕಿತು. ನೀನು ಮೂರೂವರೆ ವರ್ಷ ಸಚಿವನಾಗಿರುತ್ತೀಯ ಎಂದು ಸಿಎಂ ಯಡಿಯೂರಪ್ಪ ನನಗೆ ಮಾತು ಕೊಟ್ಟಿದ್ದಾರೆ ಎಂದಿದ್ದರು.



