ಹರಪನಹಳ್ಳಿ: ತಾಲೂಕಿನ ದಡಗಾರನಹಳ್ಳಿ ಗ್ರಾಮದ ಜಮೀನಿನಲ್ಲಿ ಬೀಡು ಬಿಟ್ಟಿದ್ದ ಕುರಿಗಳ ಮೇಲೆ ಚಿರತೆ ದಾಳಿ ಮಾಡಿದ್ದು, 25 ಮೇಕೆ ಮತ್ತು ಕುರಿಗಳನ್ನು ತಿಂದು ಹಾಕಿದೆ.
ಹೊಳಲು ಗೋಣೆಪ್ಪ, ರಾಜಪ್ಪ ಎಂಬುವರಿಗೆ ಸೇರಿದ ಕುರಿಗಳ ಮೇಲೆ ಚಿರತೆ ದಾಳಿ ಮಾಡಿದೆ. ಈ ದಾಳೆಯಲ್ಲಿ 18 ಕುರಿ ಮರಿಗಳು ಮತ್ತು 7 ಮೇಕೆಗಳನ್ನು ತಿಂದು ಹಾಕಿದೆ. ಬೆಳಿಗ್ಗೆ ರಾಜಪ್ಪ ಕುರಿ ಹಟ್ಟಿಯ ಬಳಿ ಹೋದಾಗ ಸತ್ತು ಬಿದ್ದ ಕುರಿಗಳನ್ನು ಕಂಡು ಕಣ್ಣೀರು ಹಾಕಿದ್ದಾನೆ. ಜೀವನಕ್ಕೆ ಆಧಾರವಾಗಿದ್ದ ಕುರಿಗಳ ಸಾವಿನಿಂದ ಜೀವನ ನಡೆಸುವುದು ಕಷ್ಟವಾಗಿದೆ. ನಮಗೆ ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾನೆ. ಘಟನೆಯ ಸ್ಥಳಕ್ಕೆ ಅರಣ್ಯ ಇಲಾಖಾ ಸಿಬ್ಬಂದಿ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಪಶುವೈದ್ಯಾಧಿಕಾರಿ ಡಾ.ಶ್ರೀದೇವಿ ಕುರಿ ಮತ್ತು ಮೇಕೆಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ದಡಗಾರನಹಳ್ಳಿ, ಕಾಯಕದಹಳ್ಳಿ, ಶೃಂಗಾರತೋಟ, ಬಾಗಳಿ ಕೂಲಹಳ್ಳಿ ಕೋಡಿಹಳ್ಳಿ, ಕಣವಿಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮದ ರೈತರು ಹೊಲಗಳಿಗೆ ತೆರಳಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.



