ಬೆಂಗಳೂರು: ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ ವಸೂಲಿಗಾರ, ಗುಮಾಸ್ತರರಿಗೆ ಮುಂಬಡ್ತಿ ನೀಡಲು ಕ್ರಮ ಕೈಗೊಳ್ಳುವುದಾಗಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ನಂಜೇಗೌಡ.ಕೆ.ವೈ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮಪಂಚಾಯ್ತಿಗಳಲ್ಲಿ ಜಿಲ್ಲಾಪಂಚಾಯ್ತಿಯಿಂದ ಅನುಮೋದನೆಗೊಂಡ ಕರ ವಸೂಲಿಗಾರರು ಮತುತ ಗುಮಾಸ್ತರು ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಮುಂಬಡ್ತಿ ಕೊಡಬೇಕೆಂಬ ಬೇಡಿಕೆ ಇದೆ. ಕೋವಿಡ್ ಕಾರಣದಿಂದ ಸಾಧ್ಯವಾಗಿಲ್ಲ ಇವರ ಅನುಕೂಲ ಮಾಡಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಆಶ್ವಾಸನೆ ಕೊಟ್ಟರು
ಈ ವೇಳೆ ನಂಜೇಗೌಡರು, ಕೋಲಾರದಲ್ಲಿ 173 ಕರ ವಸೂಲಿಗಾರರು , 24 ಗುಮಾಸ್ತರು ಸೇರಿದಂತೆ 197 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಕೆಲವರು ನಿವೃತ್ತಿ ಅಂಚಿನಲ್ಲಿದ್ದಾರೆ. ಕೂಡಲೇ ಇದರ ಬಗ್ಗೆ ಗಮನಹರಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಶಾಸಕ ಶಿವಲಿಂಗೇಗೌಡ ಅವರು, ಇದರಲ್ಲಿ ಕೆಲವರು ಬಿಎ, ಬಿಎಡ್ ಸೇರಿದಂತೆ ವಿವಿಧ ಪಧವೀಧರರಾಗಿದ್ದಾರೆ. ಕೆಲವು ಕಡೆ 70-30 ಅನುಪಾತದಲ್ಲಿ ಬಡ್ತಿ ನೀಡಲಾಗಿದೆ. ಉಳಿದ ಕಡೆ ಶೇ.30ರಷ್ಟು ಹುದ್ದೆಗಳು ಖಾಲಿಯಿವೆ. ಅದರಲ್ಲೂ ಕಾರ್ಯದರ್ಶಿ ಹುದ್ದೆಗಳು ಖಾಲಿಯಿದ್ದು ಭರ್ತಿ ಮಾಡಿಕೊಂಡಿಲ್ಲ. ಕೂಡಲೇ ಬಡ್ತಿ ನೀಡಬೇಕೆಂದು ಮನವಿ ಮಾಡಿದರು.



