ದಾವಣಗೆರೆ: ಜಾತಿ ಗಣತಿಯನ್ನೇ ರಾಜಕೀಯ ಅಸ್ತ್ರವಾಗಿ ಬಳಸುವ ಪ್ರಯತ್ನ ನಡೆಯುತ್ತಿದ್ದು, ವೀರಶೈವ ಲಿಂಗಾಯತರನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ನಮ್ಮ ಸಮಾಜ ಹೊರತುಪಡಿಸಿ ರಾಜ್ಯ ಆಳೋದು, ಕಾರ್ಯಕ್ರಮ ರೂಪಿಸುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅಖಿಲ ಭಾರತ ವೀರಶೈವಲಿಂಗಾಯತ ಮಹಾಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ನಮ್ಮ ಒಳಪಂಗಡಗಳನ್ನು ಬೇರ್ಪಡಿಸುವ ಕೆಲಸ ಆಗಿತ್ತು. ಸಂಸ್ಕಾರದ ತಿರುಳು ಗಟ್ಟಿಯಾಗಿ ನಮ್ಮಲ್ಲಿ ಉಳಿದಿದೆ. ಜಾತಿ ಗಣತಿ ಬಗ್ಗೆ ಸ್ಪಷ್ಟ ನಿಲುವು ಇರಬೇಕು. ಶಿಕ್ಷಣ, ಆರ್ಥಿಕತೆ, ಸ್ಥಿತಿಗತಿ ಬಗ್ಗೆ ಜನಗಣತಿ ಆಗಿದೆ. ಜಾತಿಗಣತಿ ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ. ಸಮಾಜದಲ್ಲಿ ಗೊಂದಲ ನಿರ್ಮಾಣ ಮಾಡಬಾರದು ಪಾರದರ್ಶಕ, ವೈಜ್ಞಾನಿಕ ಜನಗಣತಿ ಆಗಬೇಕು. ಸಮಾಜಕ್ಕೆ ಅನ್ಯಾಯ ಆಗಬಾರದು ಎಂದರು.
ಇತ್ತೀಚಿನ ದಿನಗಳಲ್ಲಿ ಜಾತಿ ಗಣತಿ ಹೆಸರಿನಲ್ಲಿ ಪ್ರತ್ಯೇಕ ಮಾಡುವ ಕೆಲಸ ಕೂಡ ನಡೆಯುತ್ತಿದೆ. ಅದು ಸಾಧ್ಯವಿಲ್ಲ. ಈಗ ಕರ್ನಾಟಕದಲ್ಲಿ ಆಗಿದ್ದು ಜಾತಿಗಣತಿ ಅಲ್ಲ. ಅದು ಶೈಕ್ಷಣಿಕ ಆರ್ಥಿಕ ಸಮೀಕ್ಷೆ. ಜಾತಿ ಗಣತಿ ಮಾಡುವ ಹಕ್ಕು ರಾಜ್ಯ ಸರ್ಕಾರಕ್ಕೆ ಇಲ್ಲ. ಅದು ಕೇಂದ್ರ ಸರ್ಕಾರಕ್ಕೆ ಮಾತ್ರಯಿದೆ. ಜಾತಿ ಗಣತಿ ವೈಜ್ಞಾನಿಕವಾಗಿ ನಡೆಯಬೇಕಾಗಿದೆ ಎಂದರು
ಮಹಾಸಭಾ ಅಂದರೆ ಇದೊಂದು ದೊಡ್ಡ ಸಂಸಾರ. ಮೊಮ್ಮಕ್ಕಳು, ಸೊಸೆಯಂದಿರು ಬಂಧಿಗಳಿರುವ ಕುಟುಂಬ. ಈ ಅಧಿವೇಶನ ಕಳೆದ ವರ್ಷ ಆಗಬೇಕಿತ್ತು. ಚುನಾವಣೆ ವರ್ಷ ಆದ ಹಿನ್ನಲೆಯಲ್ಲಿಈ ಬಾರಿ ಯಶಸ್ವಿಯಾಗಿ ಅಧಿವೇಶನ ನಡೆದಿದೆ. ಅಧಿವೇಶನ ಯಶಸ್ಸಿಗಾಗಿ ಶಿವಶಂಕರಪ್ಪ ಅವರನ್ನು ಅಭಿನಂದಿಸುತ್ತೇನೆ. ಎಳ್ಳುಕಾಳಷ್ಟು ಇತರರಿಗೆ ನೋವು ಮಾಡದ ಸಮಾಜ ನಮ್ಮದು. ನಮ್ಮ ಸಂಸ್ಕಾರ, ಪರಂಪರೆ ಮೂಲ ವೈಚಾರಿಕತೆ.ದೂರದೃಷ್ಠಿ ಸಮಾಜ ನಮ್ಮದು. ಯಾರು ಏನೇ ಷಡ್ಯಂತ್ರ ಮಾಡಲಿ, ಯಾರು ಆತಂಕ ಪಡುವ ಅಗತ್ಯವಿಲ್ಲ. ನಮ್ಮ ವಿಚಾರಧಾರೆ, ಆತ್ಮಸಾಕ್ಷಿ ನಮ್ಮನ್ನೆಲ್ಲ ಒಗ್ಗೂಡಿಸಲಿದೆ. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಎಲ್ಲೆಡೆ ಹೆಣ್ಮಕ್ಕಳಿಗೆ ಹಾಸ್ಟೆಲ್ ಮಾಡಿದ್ದು ಮಠಮಾನ್ಯಗಳು ಎಂದರು.