ದಾವಣಗೆರೆ: ರೈತರ ಬೇಡಿಕೆಗಿಂತ ಹೆಚ್ಚು ಯೂರಿಯಾ ಜಿಲ್ಲೆಯಲ್ಲಿ ದಾಸ್ತಾನಿದ್ದು ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಉಲ್ಲಂಘನೆ ಮಾಡಿದವರ ಮೇಲೆ ಕಠಿಣಕ್ರಮ
ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರದ ಕೊರತೆಯಾಗಿದೆ ಎಂಬ ವರದಿಯನ್ವಯ ಜಿಲ್ಲೆಯ ಎಲ್ಲಾ ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳ ತಪಾಸಣೆಯನ್ನು ಕಂದಾಯ ಅಧಿಕಾರಿಗಳು ಮತ್ತು ಕೃಷಿ ಅಧಿಕಾರಿ, ಪೊಲೀಸ್ ಅಧಿಕಾರಿಗಳೊಂದಿಗೆ ಜುಲೈ 31 ರಂದು ಜಂಟಿ ತಪಾಸಣೆ ನಡೆಸಿ ನಿಯಮಗಳನ್ನು ಉಲ್ಲಂಘನೆ ಮಾಡಿದವರ ಮೇಲೆ ಕಠಿಣಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಭತ್ತದ ಕೃಷಿ ಚಟುವಟಿಕೆಗಳು ಆರಂಭವಾಗಿದೆ. ಮತ್ತು ತಂಪು ವಾತಾವರಣ ತಗ್ಗಿದೆಯಲ್ಲದೇ ಮೆಕ್ಕೆಜೋಳಕ್ಕೆ ರಸಗೊಬ್ಬರ ಹಾಕುವ ಹಂತ ಮುಕ್ತಾಯ ಹಂತದಲ್ಲಿದೆ. ಭತ್ತದ ನಾಟಿ ಚಟುವಟಿಕೆಗಳು ನಡೆಯುತ್ತಿದ್ದು ನಾಟಿಗೂ ಮುಂಚೆ ಮೇಲುಗೊಲ್ಲರವಾಗಿ ಯೂರಿಯಾ ಹಾಕುವುದು ವಾಡಿಕೆಯಾಗಿದೆ.
ನ್ಯಾನೋ ಯೂರಿಯಾ ಬಳಕೆಗೆ ಹೆಚ್ಚಿನ ಉತ್ತೇಜನ
ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 33000 ಮೆಟ್ರಿಕ್ ಟನ್ ಯೂರಿಯಾ ಬೇಡಿಕೆ ಇದೆ. ಆದರೆ ಬೇಡಿಕೆಗಿಂತಲೂ 3 ಸಾವಿರಕ್ಕೂ ಹೆಚ್ಚು ಮೆಟ್ರಿನ್ ಟನ್ ದಾಸ್ತಾನಿದ್ದರೂ ಹರಳು ಯೂರಿಯಾಗೆ ಬೇಡಿಕೆ ಹೆಚ್ಚಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 2640 ಮೆಟ್ರಿಕ್ ಟನ್ ಯೂರಿಯಾ ದಾಸ್ತಾನಿದೆ. ಮತ್ತು ಇದರ ಜೊತೆಗೆ ಶಿವಮೊಗ್ಗದಿಂದ 454 ಮೆಟ್ರಿನ್ ಟನ್ ಯೂರಿಯಾ ತರಿಸಿಕೊಳ್ಳಲಾಗುತ್ತಿದೆ. ರೈತರು ಎಥೇಚ್ಛವಾಗಿ ಹರಳು ಯೂರಿಯಾ ಬಳಕೆ ಮಾಡುತ್ತಿದ್ದು ಇದರಿಂದ ಭೂಮಿಯ ಗುಣಮಟ್ಟವನ್ನು ಕಳೆದುಕೊಂಡು ಬೆಳೆಯಲ್ಲಿ ರೋಗಗಳು ಉಲ್ಬಣಗೊಳ್ಳುವುದು ವೈಜ್ಞಾನಿಕವಾಗಿಯು ದೃಢಪಟ್ಟಿರುತ್ತದೆ. ಈ ಹಿನ್ನೆಲೆಯಲ್ಲಿ ನ್ಯಾನೋ ಯೂರಿಯಾ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲು ಮತ್ತು ಸಮರ್ಪಕವಾಗಿ ಯೂರಿಯಾ ವಿತರಣೆ ಮಾಡಲು ಪ್ರತಿ ರೈತರಿಗೆ ಎರಡು ಚೀಲಗಳಂತೆ ನೀಡಲಾಗುತ್ತದೆ. ಇದಕ್ಕಾಗಿ ಗ್ರಾಮ ಆಡಳಿತಾಧಿಕಾರಿಗಳಿಂದ ರೈತರು ದೃಢೀಕರಣ ಪಡೆದು ರೈತರು ಯೂರಿಯಾ ತೆಗೆದುಕೊಳ್ಳಬಹುದು.
ಜಿಲ್ಲೆಯಲ್ಲಿ ಯೂರಿಯಾ ಹೊರತುಪಡಿಸಿ ಇತರೆ ರಸಗೊಬ್ಬರಗಳ ವ್ಯತ್ಯಯ ಉಂಟಾಗಿಲ್ಲ, ಹರಳು ಯೂರಿಯಾಗೆ ಹೆಚ್ಚಿನ ಬೇಡಿಕೆ ಬಂದಿದ್ದರಿಂದ ರೈತರಲ್ಲಿ ಆತಂಕವಾಗಿತ್ತೆ ವಿನಃ ಬೇಡಿಕೆಯಷ್ಟು ಪೂರೈಕೆ ಮತ್ತು ಹಂಚಿಕೆಯಾಗಿರುತ್ತದೆ. ಜಿಲ್ಲೆಯಲ್ಲಿರುವ ಸಗಟು ರಸಗೊಬ್ಬರ ಮಾರಾಟಗಾರರ ಗೋಧಾಮು ಮತ್ತು ಚಿಲ್ಲರೆ ರಸಗೊಬ್ಬರ ಮಾರಾಟಗಾರರ ಅಂಗಡಿಗಳ ಮೇಲೆ ಕಂದಾಯ ಅಧಿಕಾರಿಗಳು, ಕೃಷಿ ಅಧಿಕಾರಿಗಳು ದಾಳಿ ನಡೆಸಿ ಈ ವೇಳೆ ಲೋಪವೆಸಗಿದ ಸಗಟು ಮತ್ತು ಚಿಲ್ಲರೆ ಮಾರಾಟಗಾರರ ಲೈಸೆನ್ಸ್ ರದ್ದು ಮಾಡಿದೆ ಮತ್ತು ಅಮಾನತಿನಲ್ಲಿಡಲಾಗಿದೆ.
ಈ ಸಗಟು ಮಾರಾಟಗಾರರ ಲೈಸೆನ್ಸ್ ರದ್ದು
ರಸಗೊಬ್ಬರ ಸಗಟು ಮಾರಾಟಗಾರರಿಗೆ ಹಂಚಿಕೆಯಾದ ರಸಗೊಬ್ಬರವನ್ನು ಜಿಲ್ಲೆಯಲ್ಲಿನ ಚಿಲ್ಲರೆ ಮಾರಾಟಗಾರರಿಗೆ ಪೂರೈಕೆ ಮಾಡದೆ ಬೇರೆ ಜಿಲ್ಲೆಗಳಿಗೆ ಮಾರಾಟ ಮಾಡಿದ್ದರಿಂದ ಇವರ ಲೈಸೆನ್ಸ್ಗಳನ್ನು ರದ್ದುಪಡಿಸಲಾಗಿದೆ.
ರದ್ದುಪಡಿಸಲಾದ ಲೈಸೆನ್ಸ್ದಾರರಲ್ಲಿ ದಾವಣಗೆರೆಯ ಆಶಾಪೂರಿ ಫರ್ಟಿಲೇಸರ್ಸ್, ರಾಥೋಡ್ ಫರ್ಟಿಲೇಸರ್ಸ್, ಶ್ರೀ ಮಲ್ಲಿಕಾರ್ಜುನ ಫರ್ಟಿಲೇಸರ್ಸ್, ದಿಬ್ಬದಹಳ್ಳಿ ಆಗ್ರೋ ಸರ್ವೀಸ್, ಶ್ರೀಶ್ರೀನಿವಾಸ ಆಗ್ರೋ ಟ್ರೇಡರ್ಸ್, ಕಿಶೋರ್ ಫರ್ಟಿಲೇಸರ್ಸ್, ಚನ್ನಗಿರಿ ತಾಲ್ಲೂಕಿನ ನಲ್ಲೂರು ವೀರಭದ್ರೇಶ್ವರ ಫರ್ಟಿಲೇಸರ್ಸ್, ಗೋಪನಹಳ್ಳಿ ವೀರಭದ್ರೇಶ್ವರ ಟ್ರೇಡರ್ಸ್.
ಚಿಲ್ಲರೆ ಮಾರಾಟಗಾರರ ಲೈಸೆನ್ಸ್ ಅಮಾನತು; ರಸಗೊಬ್ಬರ ಚಿಲ್ಲರೆ ಮಾರಾಟಗಾರರು ರಸಗೊಬ್ಬರವನ್ನು ಎಂ.ಆರ್.ಪಿ. ಅಂದರೆ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರವನ್ನು ಮಾರಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ ಪರವಾನಗಿಯನ್ನು ಅಮಾನತಿನಲ್ಲಿಡಲಾಗಿದೆ. ದಾವಣಗೆರೆಯ ಭೂಮಿಕ ಆಗ್ರೋ ಫರ್ಟಿಲೇಸರ್ಸ್, ವಿನಿತ ಆಗ್ರೋ ಏಜೆನ್ಸೀಸ್, ಕುಮಾರ್ ಆಗ್ರೋ ಏಜೆನ್ಸೀಸ್, ಆನಗೋಡು ಜೆನುಕಲ್ಲು ಸಿದ್ದೇಶ್ವರ ಟ್ರೇಡರ್ಸ್ ಮತ್ತು ಸೂರ್ಯ ಆಗ್ರೋ ಎಂಟರ್ಪ್ರೈಸಸ್ ಈ ಅಂಗಡಿಗಳ ಲೈಸೆನ್ಸ್ ಅಮಾನತಿಲ್ಲಿಡಲಾಗಿದೆ.