ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಥಮ ಶಿವಗಂಗೋತ್ರಿ ಅಂತರ ವಲಯ ಮಟ್ಟದ ಯುವಜನೋತ್ಸವವು ಇಂದಿನಿಂದ (ಜ. 10) ನಡೆಯಲಿದೆ. ಕಾರ್ಯಕ್ರಮಕ್ಕೆ ವಿಶ್ವವಿದ್ಯಾನಿಲಯವು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಾಂಸ್ಕೃತಿಕ ಯುವ ಪ್ರತಿಭೆಗಳ ಆಹ್ವಾನಕ್ಕೆ ಸಜ್ಜಾಗಿದೆ.ಈಗಾಗಲೇ ದಾವಣಗೆರೆ ನಗರ, ಚಿತ್ರದುರ್ಗ ಜಿಲ್ಲೆ ಮತ್ತು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ವಲಯ ಮಟ್ಟದ ಸ್ಪರ್ಧೆಗಳು ಜ.3ರಿಂದ ನಡೆದಿವೆ. ವಿವಿಧ ವಲಯಗಳಲ್ಲಿ ವಿಜೇತರಾದ ಸ್ಪರ್ಧಿಗಳು, ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಯುವ ಅಂತಿಮ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.
ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಒಟ್ಟು 129 ಪದವಿ ಕಾಲೇಜುಗಳಿವೆ. ಅಲ್ಲದೆ ಶಿವಗಂಗೋತ್ರಿ ಸ್ನಾತಕೋತ್ತರ ವಿಭಾಗ, ಚಿತ್ರದುರ್ಗ ಜಿಲ್ಲೆಯ ದೊಡ್ಡರಂಗವ್ವನಹಳ್ಳಿ ಸ್ನಾತಕೋತ್ತರ ಕೇಂದ್ರಗಳೂ ಸೇರಿದಂತೆ ಸುಮಾರು 48 ಸಾವಿರ ವಿದ್ಯಾರ್ಥಿಗಳಿಗಾಗಿ ಸಾಂಸ್ಕøತಿಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಎ.ವಿ.ಕೆ ಮಹಿಳಾ ಪ್ರಥಮ ದರ್ಜೆ ಕಾಲೇಜು, ಬಿ.ಎಸ್.ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು, ಚಿತ್ರದುರ್ಗದ ಡಾನ್ ಬಾಸ್ಕೊ ಕಾಲೇಜು ಹಾಗೂ ವಿಶ್ವವಿದ್ಯಾನಿಲಯದ ಶಿವಗಂಗೋತ್ರಿ ಆವರಣದಲ್ಲಿ ಸ್ಪರ್ಧೆ ನಡೆದಿವೆ. ಅದರಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಯುವಜನೋತ್ಸವದಲ್ಲಿ ಮೊದಲೆರಡು ಸ್ಥಾನ ಪಡೆದ ವಿದ್ಯಾರ್ಥಿಗಳು ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯುವರು ಎಂದು ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದ್ದಾರೆ.
ಶಿವಗಂಗೋತ್ರಿ ಯುವಜನೋತ್ಸವದ ಅಧ್ಯಕ್ಷ ಪ್ರೊ.ಆರ್.ಶಶಿಧರ್, ಸ್ಪರ್ಧೆಗಳನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ. ಸಂಗೀತ ವಿಭಾಗದಲ್ಲಿ ಶಾಸ್ತ್ರೀಯ ಸಂಗೀತ ಏಕವ್ಯಕ್ತಿ (ಹಿಂದೂಸ್ತಾನಿ ಅಥವಾ ಕರ್ನಾಟಕ ಹಾಡುಗಾರಿಕೆ), ಶಾಸ್ತ್ರೀಯ ಸಂಗೀತ (ವಾದ್ಯ), ಶಾಸ್ತ್ರೀಯ ಸಂಗೀತ (ಏಕವ್ಯಕ್ತಿ ತಾಳ ವಾದ್ಯದಜೊತೆ), ಶಾಸ್ತ್ರೀಯ ಸಂಗೀತ (ತಾಳವಾದ್ಯ ರಹಿತ), ಲಘು ಸಂಗೀತ (ಭಾರತೀಯ), ಗುಂಪು ಹಾಡುಗಾರಿಕೆ (ಭಾರತೀಯ) ಸ್ಪರ್ಧೆಗಳು ನಡೆಯಲಿವೆ. ನೃತ್ಯ ವಿಭಾಗದಲ್ಲಿ ಜಾನಪದ/ಅಲೆಮಾರಿ ನೃತ್ಯ ಮತ್ತು ಶಾಸ್ತ್ರೀಯ ನೃತ್ಯಗಳನ್ನು ಪ್ರತ್ಯೇಕವಾಗಿ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಾಹಿತ್ಯಿಕ ವಿಭಾಗದಲ್ಲಿ ಕ್ವಿಜ್, ಭಾಷಣ ಸ್ಪರ್ಧೆ ಮತ್ತು ಚರ್ಚಾ ಸ್ಪರ್ಧೆಗಳು ನಡೆಯಲಿವೆ. ನಾಟಕ ವಿಭಾಗದಲ್ಲಿ ಏಕಪಾತ್ರಾಭಿನಯ, ಮೈಮ್ ಮತ್ತು ಮಿಮಿಕ್ರಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಲಾ ವಿಭಾಗದಲ್ಲಿ ಒಟ್ಟು ಏಳು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಅವುಗಳಲ್ಲಿ ಸ್ಥಳದಲ್ಲಿಯೇ ಚಿತ್ರ ಬಿಡಿಸುವುದು, ಕೊಲಾಜ್, ಪೋಸ್ಟರ್ ಮೇಕಿಂಗ್, ಮಣ್ಣಿನ ಮೂರ್ತಿ ತಯಾರಿಕೆ, ವ್ಯಂಗ್ಯಚಿತ್ರ, ರಂಗೋಲಿ ಮತ್ತು ಮೆಹಂದಿ ಬಿಡಿಸುವ ಸ್ಪರ್ಧೆಗಳನ್ನು ನಡೆಸಲಾಗುವುದು. ಏಕಕಾಲಕ್ಕೆ ನಾಲ್ಕು ಕಡೆ ಸ್ಪರ್ಧೆ ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ ತಜ್ಞರು ನಿರ್ಣಾಯಕರಾಗಿ ಕಾರ್ಯನಿರ್ವಹಿಸುವರು ಎಂದು ವಿವರಿಸಿದ್ದಾರೆ.
ಬೆಳಿಗ್ಗೆ ಯುವಜನೋತ್ಸವವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಉದ್ಘಾಟಿಸಲಿದ್ದು, ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅಧ್ಯಕ್ಷತೆ ವಹಿಸುವರು. ಸಿಂಡಿಕೇಟ್ ಸದಸ್ಯ ಮಾಡಾಳ್ ಮಲ್ಲಿಕಾರ್ಜುನ, ಕುಲಸಚಿವೆ ಬಿ.ಬಿ.ಸರೋಜ, ಪರೀಕ್ಷಾಂಗ ಕುಲಸಚಿವ ಡಾ.ಕೆ.ಶಿವಶಂಕರ್, ಹಣಕಾಸು ಅಧಿಕಾರಿ ಡಿ.ಪ್ರಿಯಾಂಕ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಮತ್ತು ಚಿತ್ರನಟ ಪೃಥ್ವಿ ಶಾಮನೂರ ಅತಿಥಿಗಳಾಗಿ ಭಾಗವಹಿಸುವರು. ಉತ್ಸವದ ಉಪಾಧ್ಯಕ್ಷ ಡಾ.ಅಶೋಕ ಕುಮಾರ ಪಾಳೇದ ಮತ್ತು ಡಾ.ಶಾರದಾದೇವಿ ಕಳ್ಳಿಮನಿ ಉಪಸ್ಥಿತರಿರುವರು ಎಂದು ಪ್ರೊ.ಶಶಿಧರ್ ಹೇಳಿದ್ದಾರೆ.