ದಾವಣಗೆರೆ: ಜಿಲ್ಲೆಯಲ್ಲಿ ಅಡಿಕೆ ಬೆಳೆ ವಿಸ್ತೀರ್ಣ ಹೆಚ್ಚಾಗುತ್ತಿದ್ದು, ಆಹಾರ ಬೆಳೆಗಳ ವಿಸ್ತೀರ್ಣ ಕುಸಿಯುತ್ತಿರುವುದರಿಂದ ಆಹಾರ ಸ್ವಾವಲಂಬನೆಗೆ ಆತಂಕ ಕಾದಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿಯಾದ ಡಾ. ಬಸವನಗೌಡ ಎಂ.ಜಿ.ಅಭಿಪ್ರಾಯಪಟ್ಟರು.
ಬಹು ಬೆಳೆ ಪದ್ಧತಿ ಅನುಸರಿಸಿ
ಕೇಂದ್ರದಿಂದ ದಾವಣಗೆರೆ ತಾಲ್ಲೂಕು ದೊಡ್ಡಬಾತಿ, ಕಕ್ಕರಗೊಳ್ಳ ಮತ್ತು ಅವರಗೊಳ್ಳ ಗ್ರಾಮಗಳಲ್ಲಿ ಕೃಷಿ ಸಂಬಂಧಿಸಿದ ಇಲಾಖೆಗಳೊಂದಿಗೆ ಹಮ್ಮಿಕೊಂಡ “ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಅಡಿಕೆ ಬೆಳೆಯಲ್ಲಿ ಅಂತರ ಬೆಳೆಗಳಾಗಿ ಕಾಳು ಮೆಣಸು, ಕೋಕೋ, ಜಾಯಿಕಾಯಿಗಳನ್ನು ಬೆಳೆಯಲು ಅವಕಾಶವಿದ್ದು, ಬಹು ಬೆಳೆ ಮತ್ತು ಬಹು ಮಹಡಿ ಪದ್ಧತಿಯನ್ನು ಅನುಸರಿಸಬೇಕೆಂದು ತಿಳಿಸಿದರು.
ಈ ವರ್ಷ ಪೂರ್ವ ಮುಂಗಾರು ಉತ್ತಮವಾಗಿದ್ದು ತೋಟಗಾರಿಕೆ ಬೆಳೆಗಳಿಗೆ ಅನುಕೂಲವಾಗಿದೆ. ಬಿಡುವು ಬಂದಾಗ ಅಡಿಕೆ ಮತ್ತು ತೆಂಗಿನ ಬೆಳೆಗಳಿಗೆ ಸಮರ್ಪಕ ಪೋಷಕಾಂಶ ನಿರ್ವಹಣಾ
ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ಹಸಿರೆಲೆಗೊಬ್ಬರಗಳ ಬಳಕೆ ಮಾಡಿ
ಉಪಕೃಷಿ ನಿರ್ದೇಶಕ ಅಶೋಕ್ ಮಾತನಾಡಿ ಕೃಷಿಯಲ್ಲಿ ನೀರಿನ ಸದ್ಭಳಕೆ, ಹಸಿರೆಲೆಗೊಬ್ಬರಗಳ ಬಳಕೆ ಮತ್ತು ಮಣ್ಣು ಪರೀಕ್ಷೆಯಿಂದ ಮಣ್ಣಿನ ಆರೋಗ್ಯವನ್ನು ಸುಧಾರಿಸಬಹುದೆಂದು ತಿಳಸಿದರು.ಬೆಂಗಳೂರಿನ ಕೇಂದ್ರ ಒಳನಾಡು ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ. ಶಾಂತನುಕುಮಾ, ಮೀನುಗಾರಿಕೆಯ ಹೊಸ ತಂತ್ರಜ್ಞಾನಗಳ ಬಗ್ಗೆ ಮತ್ತು ಅವಕಾಶಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ, ತೋಟಗಾರಿಕೆ ಇಲಾಖೆಗಳ ಬಗ್ಗೆ ರೇಷ್ಮಾ ಪರ್ವಿನ್, ಮೀನುಗಾರಿಕೆ ಇಲಾಖೆಯ ಬಗ್ಗೆ ಡಾ. ಪ್ರಕಾಶ್ ಪಾವಡಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಶ್ರೀ ಚಂದ್ರಪ್ಪ, ಮುಖಂಡರಾದ ಶ್ರೀ ಹನುಮಂತಪ್ಪ, ಛೇರ್ಮನ್ ಉಮೇಶಣ್ಣ, ಕೆ.ಜಿ. ಬಸವನಗೌಡ, ಶ್ರೀ ಗುತ್ಯಪ್ಪ, ಶ್ರೀ ವೀರಯ್ಯ ಮತ್ತು 500 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.