ದಾವಣಗೆರೆ: ಸಸ್ಯ ಸಂಕುಲದಲ್ಲಿ ತೆಂಗು ಕಲ್ಪವೃಕ್ಷದ ಹಾಗೆ. ತೋಟಗಾರಿಕೆ ಬೆಳೆಗಳಲ್ಲಿ ನಿಯಮಿತ ಆದಾಯ ಮತ್ತು ಅತೀ ಹೆಚ್ಚು ಉಪ ಉತ್ಪನ್ನಗಳನ್ನು ನೀಡುವ ಬೆಳೆ ತೆಂಗು ಇದರ ಸಂರಕ್ಷಣೆ ಮತ್ತು ಸಂಸ್ಕರಣೆ ನಮ್ಮೆಲ್ಲರ ಹೊಣೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ತಿಳಿಸಿದರು.
ತೆಂಗು ಅಭಿವೃದ್ಧಿ ಮಂಡಳಿ, ಬೆಂಗಳೂರು ಹಾಗೂ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ೬ ದಿನಗಳ ‘ತೆಂಗಿನ ಮರದ ಸ್ನೇಹಿತರು’ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಇಂದು ತೆಂಗಿನ ಬೇಸಾಯದ ಉತ್ಪಾದನಾ ತೊಡಕುಗಳಲ್ಲಿ ಕಾಯಿ ಕೀಳುವವರ ಲಭ್ಯತೆಯೂ ಒಂದು. ಕೃಷಿಯಲ್ಲಿ ಕಾರ್ಮಿಕರ ಕೊರತೆಯನ್ನು ನೀಗಿಸಲು ಇಂತಹ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳು ಸಹಕಾರಿಯಾಗಲಿದ್ದು ಆದಾಯೋತ್ಪನ್ನ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರು ಹಾಗೂ ನಿವೃತ ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಚಂದ್ರಪ್ಪ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳಲ್ಲಿ ಕೌಶಲ್ಯದ ಬಳಕೆ ತುಂಬಾ ಸಹಕಾರಿಯಾಗುತ್ತದೆ. ಅಡಿಕೆ ಬೆಳೆಯ ವಿಸ್ತೀರ್ಣದಿಂದ ಇಂದು ತೆಂಗಿನ ಬೆಳೆ ಮಲತಾಯಿ ಧೋರಣೆ ಅನುಭವಿಸುತ್ತಿದೆ. ತೆಂಗಿನ ಉಪ ಉತ್ಪನ್ನಗಳಿಂದ ಇಂದು ಉತ್ತಮ ಆದಾಯ ಗಳಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥ ಡಾ. ದೇವರಾಜ ಟಿ.ಎನ್. ಮಾತನಾಡಿ, ಶತಮಾನಗಳಿಂದ ಕಲಬರಕೆ ರಹಿತ ಪದಾರ್ಥಗಳಲ್ಲಿ ತೆಂಗೂ ಸಹ ಒಂದು. ಇಂದು ತೆಂಗಿನ ಉಪ ಉತ್ಪನ್ನಗಳನ್ನು ಸಂಸ್ಕರಿಸಿ ಮಾರಾಟ ಮಾಡಿದರೆ ಉತ್ತಮ ಲಾಭಗಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ನಾವು ಈಗಾಗಲೇ ನಿಟ್ಟೂರು ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ವತಿಯಿಂದ ತೆಂಗಿನ ವರ್ಜಿನ್ ಎಣ್ಣೆ, ತೆಂಗಿನ ಚಿಪ್ಸ್, ತೆಂಗಿನ ಪೌಡರ್ಗಳನ್ನು ‘ತರಳಾಮೃತ’ ಬ್ರ್ಯಾಂಡ್ ನಲ್ಲಿ ಮಾರಾಟದ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಇದರಿಂದ ತೆಂಗಿನ ಬೆಲೆಯ ಸ್ಥಿರತೆ ಕಾಪಾಡುವಲ್ಲಿ ಸಹಕಾರಿಯಾಗುವುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ರಘುರಾಜ ಜೆ., ಸಣ್ಣಗೌಡ್ರ ಹೆಚ್. ಎಂ., ಡಾ. ಅವಿನಾಶ ಟಿ.ಜಿ., ಜಿಲ್ಲೆಯ ವಿವಿಧ ಭಾಗಗಳಿಂದ ಆಯ್ಕೆಯಾದ 20 ಶಿಭಿರಾರ್ಥಿಗಳು ಭಾಗವಹಿಸಿದ್ದರು.



