ದಾವಣಗೆರೆ: ಸಾಮಾಜಿಕ ಜಾಲತಾಣಗಳಲ್ಲಿ ಯುವಕರು ಪ್ರಚೋದನಕಾರಿ ಪೋಸ್ಟ್ ಹಾಕುವುದಾಗಲಿ, ಫೇಕ್ ನ್ಯೂಸ್ ಮಾಡುವುದಾಗಲಿ ಅಥವಾ ಅಚಾತುರ್ಯ ಘಟನೆಗಳಲ್ಲಿ ಭಾಗಿಯಾದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಯುವ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ತರವಾಗಿದೆ, ದೇಶವನ್ನು ಅಭಿವೃದ್ಧಿಪಡಿಸಲು ಮತ್ತು ಪ್ರಗತಿಯತ್ತ ಸಾಗಲು ಸಹಾಯ ಮಾಡುವ ಶಕ್ತಿ ಹೊಂದಿದ್ದಾರೆ. ದೇಶದೊಳಗೆ ಸಾಮಾಜಿಕ ಸುಧಾರಣೆ ತರುವ ಜವಾಬ್ದಾರಿಯೂ ಸಹ ಯುವಕರ ಮೇಲಿದೆ. ದೇಶದ ಸದೃಢತೆಗೆ ಯುವ ಶಕ್ತಿಗಳು ಸನ್ನದ್ದರಾಗಿ ಸಮಾಜ ಘಾತಕ ಶಕ್ತಿಗಳ ಮಾಹಿತಿಯನ್ನು ಇಲಾಖೆಯೊಂದಿಗೆ ಹಂಚಿಕೊಳ್ಳಬೇಕೆಂದು ಎಂದರು.
ಯುವ ಜನರು ಇಂದಿನ ದಿನಗಳಲ್ಲಿ ಮೊಬೈಲ್ ಬಳಕೆಗೆ ಹೆಚ್ಚಿನ ಸಮಯ ವ್ಯಯಮಾಡುವ ಮೂಲಕ ತಮ್ಮ ಉತ್ತಮ ಭವಿಷ್ಯಕ್ಕೆ ಮೀಸಲಾದ ಸಮಯವನ್ನಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಯುವ ಪೀಳಿಗೆಯನ್ನು ಆವರಿಸಿರುವ ಮಾದಕ ವಸ್ತುಗಳು ದೈಹಿಕವಾಗಿ ಮಾತ್ರವಲ್ಲ, ಅವರ ಮಾನಸಿಕ ಆರೋಗ್ಯವನ್ನು ಹದಗೆಡಿಸುವುದಲ್ಲದೆ ತಮ್ಮ ಕುಟುಂಬದ ಆರ್ಥಿಕತೆ ಹಾಗೂ ಸಮಾಜದ ಆರ್ಥಿಕತೆ ಮೇಲೆ ನಷ್ಟ ತರುತ್ತದೆ ಎಂದು ತಿಳಿಸಿದರು.
ಪ್ರಗತಿ ಮತ್ತು ನಾವೀನ್ಯತೆಯನ್ನು ತರಲು ಸಾಕಷ್ಟು ಸಾಮಥ್ರ್ಯವನ್ನು ಹೊಂದಿರುವ ದೇಶದ ಯುವಕರಲ್ಲಿ ಆಡಳಿತವನ್ನು ಬದಲಾಯಿಸುವ ಕ್ರಿಯಾತ್ಮಕ ಶಕ್ತಿಯು ಇದೆ. ದೇಶದ ಉಜ್ವಲತೆ ಮತ್ತು ಉತ್ತುಂಗಕ್ಕೆ ಕೊಂಡೊಯ್ಯಲು ಅವರ ಶಕ್ತಿ, ಆಲೋಚನೆಗಳು ಮತ್ತು ನಾವೀನ್ಯತೆ ಇಂದಿನ ಅಗತ್ಯವಾಗಿದೆ.
ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಿದೆ ಇದ್ದಲ್ಲಿ ಪೊಲೀಸ್ ಠಾಣೆ ಮುಂದೆ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಅದನ್ನು ಸ್ಕ್ಯಾನ್ ಮಾಡಿ ಅವರ ಬಗ್ಗೆ ಮಾಹಿತಿ ನೀಡಿದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಯುವಕರು ತಮ್ಮ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮಗಳಲ್ಲಿ ಕಾನೂನು ಉಲ್ಲಂಘನೆ, ಕಾನೂನು ಬಾಹಿರ ಚಟುವಟಿಕೆ ನೆಡೆದಿದ್ದಲ್ಲಿ ಪೊಲೀಸ್ ಇಲಾಖೆ ಮೇಲೆ ಗೌರವ, ನಂಬಿಕೆಯಿಟ್ಟು ಧೈರ್ಯವಾಗಿ ಮಾಹಿತಿ ನೀಡಿ ಎಂದು ತಿಳಿಸಿದರು.
ಹೆಚ್ಚುವರಿ ರಕ್ಷಣಾಧಿಕಾರಿ ವಿಜಯ್ಕುಮಾರ್ ಎಂ.ಸಂತೋಷ ಮಾತನಾಡಿ ಸಮಾಜದಲ್ಲಿ ಕೆಡುಕು ಬಯಸುವವರ ಬಗ್ಗೆ ಇಲಾಖೆಗೆ ಮಾಹಿತಿ ನೀಡಲು ಪ್ರತಿಯೊಂದು ಗ್ರಾಮ, ಜಿಲ್ಲೆಯ ಪೆÇಲೀಸ್ ಠಾಣೆಯಲ್ಲಿ ಯುವ ಸಮಿತಿ ರಚನೆ ಮಾಡಲಾಗಿದೆ. ತಮ್ಮ ಸುತ್ತಮುತ್ತ ನಡೆಯುವಂತ ಸಮಾಜಘಾತಕ ಕೃತ್ಯ, ಮಾದಕ ವಸ್ತುಗಳ ಮಾರಾಟ, ಜೂಜಾಟ, ಅಹಿತಕರ ಘಟನೆಗಳ ಬಗ್ಗೆ ನಿಖರವಾದ ಮಾಹಿತಿ ನೀಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಮಂಜುನಾಥ್ ಜಿ, ಡಿ.ವೈ.ಎಸ್.ಪಿ ಮಲ್ಲೇಶ್ ಹಾಗೂ ಇತರೆ ಅಧಿಕಾರಿಗಳು, ಯುವಕರು ಉಪಸ್ಥಿತರಿದ್ದರು.



