ಕಲಬುರ್ಗಿ: ತಾಲ್ಲೂಕಿನ ಶ್ರೀನಿವಾಸ ಸರಡಗಿಯ ಶ್ರೀಗುರು ಚಿಕ್ಕವಿರೇಶ್ವರ ಸಂಸ್ಥಾನ ಹಿರೇಮಠದ 2021ನೇ ಸಾಲಿನ ರಾಜ್ಯಮಟ್ಟದ ಚಿನ್ನದ ಕಂತಿ ಪ್ರಶಸ್ತಿಗೆ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಶ್ರೀಮಠದ ಪೀಠಾಧಿಪತಿ ಡಾ. ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಏಪ್ರಿಲ್ 4ರಂದು ಬೆಳಿಗ್ಗೆ 11ಕ್ಕೆ ನಗರದ ಸಾರ್ವಜನಿಕ ಉದ್ಯಾನವನದ ವೀರಶೈವ ಕಲ್ಯಾಣ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶಾಮನೂರ ಶಿವಶಂಕ್ರಪ್ಪ ಅವರ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ಪತ್ರ, ಫಲಕವನ್ನೊಳಗೊಂಡಿದೆ ಎಂದರು.
ಚಿನ್ನದ ಕಂತಿ ಪ್ರಶಸ್ತಿಯನ್ನು ಈ ಹಿಂದೆ ಮಾಜಿ ಶಾಸಕ, ಉದ್ಯಮಿ ಡಾ. ಅಶೋಕ ಖೇಣಿ, ನಾಲವಾರ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಡಾ. ತೋಟೇಂದ್ರ ಸ್ವಾಮೀಜಿ, ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ, ಇಸ್ರೊ ಮಾಜಿ ಅಧ್ಯಕ್ಷ, ಬಾಹ್ಯಾಕಾಶ ವಿಜ್ಞಾನಿ ಡಾ. ಕಿರಣಕುಮಾರ, ತುಮಕೂರ ಜಿಲ್ಲೆಯ ನೊಣವಿನೆಕೆರೆಯ ಕಾಡಸಿದ್ದೇಶ್ವರ ಮಠದ ಕರಿವೃಷಭೇಂದ್ರ ಸ್ವಾಮೀಜಿ ಹಾಗೂ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಮುಖ್ಯಸ್ಥ ಡಾ. ಸಿ.ಎನ್. ಮಂಜುನಾಥ ಅವರಿಗೆ ನೀಡಲಾಗಿದೆ ಎಂದು ವಿವರಿಸಿದರು.



