ದಾವಣಗೆರೆ: ರಿಂಗ್ ರಸ್ತೆ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶದಿಂದ ಕಾಮಗಾರಿಗೆ ಅಡಚಣೆಯಾಗಿದ್ದ ಮಾಗಾನಹಳ್ಳಿ ರಸ್ತೆಯ ರಾಮಕೃಷ್ಣ ಹೆಗಡೆ ನಗರದ ಮನೆ ತೆರವು ಕಾರ್ಯಾಚರಣೆಯನ್ನು ಇಂದು ಜಿಲ್ಲಾಡಳಿತ ವತಿಯಿಂದ ಕೈಗೊಳ್ಳಲಾಗಿತ್ತು. ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪಾಲಿಕೆ ಆಯುಕ್ತರ ವಿರುದ್ಧ ವಾಗ್ವಾದ ನಡೆಸಿದರು.
ಎಡಿಸಿ ಲೋಕೇಶ್, ಎಎಸ್ ಪಿ ವಿಜಯಕುಮಾರ ಸಂತೋಷ, ಎಸಿ ದುರ್ಗಾಶ್ರೀ ನೇತ್ರತ್ವದಲ್ಲಿ ಮನೆಗಳನ್ನು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಯಿತು. ಸ್ಥಳೀಯರು ವಿರೋಧದಿಂದ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಏಕಾಏಕಿ ಮನೆ ಕೆಡವಿದ್ದರಿಂದ ಸ್ಥಳೀಯರು ಆಕ್ರೋಶ ಹೊರಹಾಕಿ ಪಾಲಿಕೆ ಆಯುಕ್ತೆ ರೇಣುಕಾ ಅವರನ್ನು ತರಾಟೆಗೆ ತೆಗೆದುಕೊಂಡರು.
419ಕ್ಕೂ ಹೆಚ್ಚು ಮನೆಗಳ ತೆರವಿಗೆ ಜಿಲ್ಲಾಡಳಿತ ಯೋಜನೆ ರೂಪಿಸಿದೆ. ಇದಕ್ಕಾಗಿ ಕೆಲವರಿಗೆ ಈಗಾಗಲೇ ಬೇರೆಡೆ ವಾಸಿಸಲು ಹಕ್ಕು ಪತ್ರ ವಿತರಣೆ ಮಾಡಲಾಗುತ್ತಿದೆ. ಹಕ್ಕು ಪತ್ರ ಸಿಗದವರು ತೆರವು ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮನೆಯಲ್ಲಿರುವ ವಸ್ತುಗಳನ್ನು ತೆಗೆಯಲು ಬಿಡದೆ ಜೆಸಿಬಿಯಿಂದ ಮನೆ ಕೆಡವಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್, ಜೆಸಿಬಿ ತಂದು ಹೆದರಿಸಿದರೇ ನಾವು ಹೆದರಲ್ಲ.ಮುಂದೆ ಏನಾಗುತ್ತೋ ನೋಡೋಣ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಮನೆಗಳ ತೆರವು ಕಾರ್ಯ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಇಂದು ಬೆಳಗ್ಗೆ 5ರಿಂದ ಇಂದು ಸಂಜೆ 5ಗಂಟೆ ತನಕ 144 ನಿಷೇಧಾಜ್ಞೆ ಜಾರಿ (144 Section) ಮಾಡಿ ದಾವಣಗೆರೆ ಉಪ ವಿಭಾಗಾಧಿಕಾರಿ ದುರ್ಗಾಶ್ರೀ ಆದೇಶ ಹೊರಡಿಸಿದ್ದರು.



