ದಾವಣಗೆರೆ: ದೀಪಾವಳಿ ಹಬ್ಬಕ್ಕೆ ನಗರದ ಮಧ್ಯ ಭಾಗದಲ್ಲಿ ಪಟಾಕಿ (firecrackers) ಮಾರಾಟಕ್ಕೆ ಅವಕಾಶ ಕಲ್ಪಿಸಬೇಕೆಂದು ವ್ಯಾಪಾರಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಭೇಟಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ವ್ಯಾಪಾರಸ್ಥರು ಹಾಗೂ ಜನರಿಗೆ ತೊಂದರೆಯಾಗದಂತೆ ನಗರದ ಮಧ್ಯ ಭಾಗದಲ್ಲಿ ಪಟಾಕಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಪಟಾಕಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪಿ.ಸಿ. ಶ್ರೀನಿವಾಸ ಭಟ್ ಸೇರಿ ವ್ಯಾಪಾರಸ್ಥರು, ದಾವಣಗೆರೆ ಮಧ್ಯ ಭಾಗದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಮುಂಚೆಯಿಂದಲೂ ಪಟಾಕಿ ಮಾರಾಟ ಮಾಡುತ್ತಿದ್ದ ಸ್ಥಳದ ಬದಲಿಗೆ ಹಳೆ ಪಿಬಿ ರಸ್ತೆಯ ಜಿಎಂಐಟಿ(GMIT) ಕಾಲೇಜು ಬಳಿ ಪಟಾಕಿ ಮಾರಾಟಕ್ಕೆ ಸೂಚಿಸಿದ್ದು, ಇದರಿಂದ ವ್ಯಾಪಾರಸ್ಥರಿಗಷ್ಟೇ ಅಲ್ಲ ಸಾರ್ವಜನಿಕರಿಗೂ ತೀವ್ರ ತೊಂದರೆ ಎಂದು ಸಚಿವರ ಗಮನಕ್ಕೆ ತಂದರು.
ದೀಪಾವಳಿ ಹಬ್ಬಕ್ಕೆ ಇನ್ನೂ 10 ದಿನಗಳಷ್ಟೇ ಉಳಿದಿದ್ದು, ಅಷ್ಟರಲ್ಲಿ ಮಳಿಗೆ ಆಗಿ, ನಾವು ಪಟಾಕಿ ಮಾರಾಟ ಮಾಡುವುದು ಕಷ್ಟ ಸಾಧ್ಯ. ಅಂತಹದ್ದರಲ್ಲಿ ಅಷ್ಟು ದೂರ ಪಟಾಕಿ ಮಾರಾಟಕ್ಕೆ ಸೂಚಿಸಿದರೆ ಕಷ್ಟ, ದಾವಣಗೆರೆ ಮಧ್ಯ ಭಾಗದಲ್ಲೇ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲು ಒತ್ತಾಯಿಸಿದರು.
ಪಟಾಕಿ ವ್ಯಾಪಾರಸ್ಥರ ಮನವಿ ಸ್ವೀಕರಿಸಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಪಟಾಕಿ ವ್ಯಾಪಾರಸ್ಥರು, ಜನರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಸ್ಥಳದಲ್ಲಿ ಪಟಾಕಿ ಮಾರಾಟಕ್ಕೆ ಜಾಗ ಕಲ್ಪಿಸಲು ಡಾ.ಎಂ.ವಿ.ವೆಂಕಟೇಶ್ ಅವರಿಗೆ ಕರೆ ಮಾಡಿ ಸೂಚಿಸಿದರು. ಇತ್ತೀಚೆಗೆ ಜಿಲ್ಲಾಡಳಿತ ಪಟಾಕಿ ಮಾರಾಟವನ್ನು ಹೈಸ್ಕೂಲ್ ಮೈದಾನದಿಂದ ನಗರದ ಹೊರ ವಲಯದ ಜಿಎಂಐಟಿ ಪಕ್ಕದಲ್ಲಿ ಅವಕಾಶ ಕಲ್ಪಿಸಿತ್ತು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಕಾರ್ತಿಕ್, ಅಮಿತ್, ಗೋವಿಂದ ಐನಹಳ್ಳಿ, ಶಿವು. ಹಾಲೇಶಪ್ಪ, ಜಗನ್ನಾಥ, ರಮೇಶ, ರವಿಕುಮಾರ, ಕೂ ಹೆಚ್ಚು ಪಟಾಕಿ ಅಂಗಡಿ ವರ್ತಕರು ಹಾಜರಿದ್ದರು.



