ಡಿವಿಜಿ ಸುದ್ದಿ, ದಾವಣಗೆರೆ: ನಗರದ ಹೃದಯ ಭಾಗದಲ್ಲಿರುವ ಶ್ರೀಮದ್ ಅಭಿನವ ರೇಣುಕ ಮಂದಿರ ಆವರಣದಲ್ಲಿ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಮಂಟಪ ನಿರ್ಮಾಣಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಶ್ರೀಗಳು, ಶ್ರೀ ಪೀಠದ ಜಗದ್ಗುರು ತ್ರಯರ ಪಾದದಿಂದ ಪವಿತ್ರವಾದ ಈ ಸ್ಥಾನದಲ್ಲಿ ಸುಂದರ ಮಂಗಲ ಮಂಟಪ ನಿರ್ಮಾಣಗೊಳ್ಳುತ್ತದೆ. ದಾವಣಗೆರೆ ನಗರಕ್ಕೆ ಶ್ರೀ ರಂಭಾಪುರಿ ಪೀಠದ ಸಂಪರ್ಕ ಸಹಯೋಗ ಮೊದಲಿನಿಂದಲೂ ಇದ್ದು ಲಿಂ. ಶ್ರೀ ವೀರಗಂಗಾಧರ ಜಗದ್ಗುರುಗಳು ಆಜೀವ ಪರ್ಯಂತರ ಆಷಾಢ ಪೂಜೆ ಮಾಡಿ ಭಕ್ತರಿಗೆ ಆಶೀರ್ವದಿಸಿದ್ದನ್ನು ಮರೆಯಲಾಗದು ಎಂದರು.
ಅವರ ಹೆಸರಿನಲ್ಲಿಯೇ ಈ ಮಂಗಲ ಮಂಟಪ ನಿರ್ಮಾಣವಾಗುತ್ತಿದ್ದು, ಅರೇಳು ಕೋಟಿ ರೂ. ವೆಚ್ಚವಾಗಲಿದೆ. ಸುಸಜ್ಜಿತವಾದ ಮತ್ತು ಧರ್ಮ ಬಾಂಧವರಿಗೆ ಅನುಕೂಲಕರ ರೀತಿಯಲ್ಲಿ ಕಟ್ಟಡ ನಿರ್ಮಾಣಗೊಳ್ಳುತ್ತದೆ ಎಂದ ಅವರು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪನವರು ಮತ್ತು ಲೆಕ್ಕ ಪರಿಶೋಧಕ ಅಥಣಿ ವೀರಣ್ಣ ವಿಶೇಷ ಗಮನ ಹರಿಸಿ ಕಾರ್ಯ ಕೈಗೊಳ್ಳಲಿದ್ದಾರೆ.
ಬಹು ದೊಡ್ಡದಾದ ವೀರಶೈವ ಸಮಾಜ ಇಂದು ರಾಜಕೀಯ ದೃಷ್ಠಿಯಿಂದ ಒಡೆದು ಹೋಗುತ್ತಿರುವುದು ಒಳ್ಳೆಯದಲ್ಲ. ಇದಕ್ಕಾಗಿ ಮಹಾಸಭಾ ಎಲ್ಲ ಒಳ ಪಂಗಡಗಳನ್ನು ಧರ್ಮದ ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಮುನ್ನಡೆಸಲು ಶ್ರಮಿಸುತ್ತಿದ್ದಾರೆ. ಎಲ್ಲರ ಸಹಕಾರ ಮುಖ್ಯವಾಗಿದ್ದು ಧರ್ಮ ಸಮಾಜ ಕಟ್ಟಿ ಬೆಳೆಸುವ ಕೆಲಸವಾಗಬೇಕೆಂದರು.
ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಡಾ.ಶಾಮನೂರು ಶಿವಶಂಕರಪ್ಪ, ಅತಿ ವೇಗವಾಗಿ ದಾವಣಗೆರೆ ನಗರ ಬೆಳೆಯುತ್ತಿದೆ. ನಗರದ ಮಧ್ಯವರ್ತಿ ಕೇಂದ್ರದಲ್ಲಿ ಶ್ರೀಮದ್ ಅಭಿನವ ರೇಣುಕ ಮಂದಿರ ಇದ್ದು ಬಾಳೆಹೊನ್ನೂರು ಧರ್ಮ ಪೀಠದ ಮಾರ್ಗದರ್ಶನದಲ್ಲಿ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಮಂಟಪ ನಿರ್ಮಾಣಗೊಳ್ಳುತ್ತಿರುವುದು ಸಂತೋಷದ ಸಂಗತಿ. ವಿಶ್ವ ಬಂಧುತ್ವದ ವೀರ ಗರ್ಜನೆ ಮಾಡಿದ ಲಿಂ. ಶ್ರೀ ವೀರಗಂಗಾಧರ ಜಗದ್ಗುರುಗಳ ಹೆಸರಿನಲ್ಲಿ ನಿರ್ಮಾಣಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ.
ಸರ್ಕಾರದಿಂದ 2 ಕೋಟಿ ರೂ. ಅನುದಾನ ಸಹ ದೊರಕಿದ್ದು, ಮಿಕ್ಕ ಹಣವನ್ನು ಎಲ್ಲರೂ ಸೇರಿ ಸೇವೆ ಸಲ್ಲಿಸಿ ಶೀಘ್ರವಾಗಿ ಕಾರ್ಯ ಪೂರ್ಣಗೊಳ್ಳಲು ಶ್ರಮಿಸುತ್ತೇವೆ. ಶ್ರೀ ರಂಭಾಪುರಿ ಜಗದ್ಗುರುಗಳು ಧರ್ಮ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಮತ್ತು ಸಂಸ್ಕಾರ ಸದ್ವಿಚಾರಗಳನ್ನು ಬೋಧಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು ಹರುಷದ ಸಂಗತಿ ಎಂದರು.
ಮುಖ್ಯ ಅತಿಥಿಗಳಾದ ಅಥಣಿ ವೀರಣ್ಣನವರು ಮಾತನಾಡಿ, ಬಹಳ ದಿನದ ಕನಸು ನನಸಾಗುತ್ತಿದೆ. ಶಿಥಿಲಗೊಂಡ ಕಲ್ಯಾಣ ಮಂಟಪ ತೆಗೆದು ಅದೇ ಜಾಗದಲ್ಲಿ ಲಿಂ. ಶ್ರೀ ಗಂಗಾಧರ ಜಗದ್ಗುರುಗಳ ಹೆಸರಿನಲ್ಲಿ ಭವ್ಯ ಸುಂದರ ಮಂಗಲ ಮಂಟಪ ನಿರ್ಮಿಸಲು ಇಂದಿನ ಶ್ರೀ ರಂಭಾಪುರಿ ಜಗದ್ಗುರುಗಳು ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುತ್ತಿರುವುದು ಈ ಕಾರ್ಯಕ್ಕೆ ಚಾಲನೆ ಸಿಕ್ಕಿರುವುದು ಸಾಕ್ಷಿಯಾಗಿದೆ. ಆದಷ್ಟು ಬೇಗ ಕಟ್ಟಡ ಕಾರ್ಯ ಪೂರ್ಣಗೊಳಿಸಿ ಜನ ಬಳಕೆಗಾಗಿ ಲೋಕಾರ್ಪಣೆ ಮಾಡುವ ಸಂಕಲ್ಪವನ್ನು ಟ್ರಸ್ಟ್ ಸಂಕಲ್ಪಿಸಿದೆ. ಶ್ರೀ ರಂಭಾಪುರಿ ಜಗದ್ಗುರುಗಳವರ ಆಶೀರ್ವಾದ ಬಲವೇ ಈ ಮಹತ್ಕಾರ್ಯಕ್ಕೆ ಸ್ಫೂರ್ತಿ ಎಂದರು.