ದಾವಣಗೆರೆ: ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಮತ್ತೆ ಮುಂಗಾರು ಮಳೆ ಅಬ್ಬರ ಜೋರಾಗಿದೆ. ಕಳೆದ ಮೂರು ದಿನದಿಂದ ಸತತ ಮಳೆಯಾಗುತ್ತಿದ್ದು, ಇಂದು ಕೂಡ ಬೆಣ್ಣೆ ನಗರಿಯಲ್ಲಿ ಮಳೆ ಅಬ್ಬರಿಸಿದೆ.
ಕಳೆದ 20 ದಿನದಿಂದ ಜಿಲ್ಲೆಯಲ್ಲಿ ಮಳೆ ತೀವ್ರ ಕೊರತೆ ಎದುರಾಗಿತ್ತು. ಕಾಳು ಕಟ್ಟಲು ಕೊನೆ ಮಳೆಗಾಗಿ ಕಾಯುತ್ತಿದ್ದ ಮೆಕ್ಕೆಜೋಳ ಬೆಳೆ ಒಣಗುತ್ತಿದ್ದವು. ಆದರೆ, ಈಗ ಮೂರು ದಿನದಿಂದ ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ಇದರಿಂದ ಕೆರೆ-ಕಟ್ಟೆ, ಹಳ್ಳ- ಕೊಳ್ಳಗಳು ತುಂಬಿವೆ. ರೈತರ ಮುಖದಲ್ಲಿ ಸಂತಸ ಮೂಡಿದೆ.
ಇಂದು (ಸೆ.24) ದಾವಣಗೆರೆ ನಗರದ, ವಿದ್ಯಾನಗರ, ಶಾಮನೂರು ರಸ್ತೆ, ಹದಡಿ ರಸ್ತೆ, ಪಿಬಿ ರಸ್ತೆ, ಬೇತೂರು ರಸ್ತೆ, ಹಳೆ ದಾವಣಗೆರೆ, ಕೊಡಜ್ಜಿ ರಸ್ತೆ, ಸಂಗೊಳ್ಳಿರಾಯಣ್ಣ ಸರ್ಕಲ್, ರಿಂಗ್ ರಸ್ತೆ ಸೇರಿದಂತೆ ವಿವಿಧ ಕಡೆ ಜೋರು ಮಳೆ ಸುರಿದಿದೆ. ಶಾಲೆಗಳು ಬಿಡುವ ಸಮಯಕ್ಕೆ ಜೋರು ಮಳೆ ಶುರುವಾಗಿದ್ದರಿಂದ ಮಕ್ಕಳು ಮನೆ ಸೇರಲು ಪರದಾಡಿದರು. ತಗ್ಗು ಪ್ರದೇಶದಲ್ಲಿ ನೀರು ನಿಂತಿತ್ತು.



