ದಾವಣಗೆರೆ: ಜಿಲ್ಲೆಯಲ್ಲಿ ತುಂಬಾ ದಿನದ ಬಿಡುವಿನ ನಂತರ ಮತ್ತೆ ಮಳೆ ಎಂಟ್ರಿ ಕೊಟ್ಟಿದೆ. ಮೆಕ್ಕೆಜೋಳ ಬೆಳೆಗೆ ತೇವಾಂಶವಿಲ್ಲದೆ ಬತ್ತಿ ನಿಂತಿವೆ. ಈಗ ಜಿಲ್ಲೆಯ ಚನ್ನಗಿರಿ, ಹರಿಹರ, ಹೊನ್ನಾಳಿ, ನ್ಯಾಮತಿ, ದಾವಣಗೆರೆ ಸೇರಿದಂತೆ ವಿವಿಧ ಭಾಗದಲ್ಲಿ ಮಳೆಯಾಗಿದೆ.
ಜಿಲ್ಲೆಯಲ್ಲಿ ಒಂದು ತಿಂಗಳ ಬಿಡುವಿಲ್ಲದ ಮಳೆ ನಂತರ 15 ದಿನದಿಂದ ಮಳೆ ಮಾಯವಾಗಿತ್ತು. ಮಕ್ಕೆಜೋಳ ಬೆಳೆಗೆ ಕೊನೆಯದಾಗಿ ಒಂದು ಮಳೆ ಅಗತ್ಯವಿತ್ತು. ಇದಕ್ಕಾಗಿ ರೈತರ ಕಾಯುತ್ತಿದ್ದರು. ಇದೀಗ ಜಿಲ್ಲೆಯಲ್ಲಿ ಇಂದಿನಿಂದ ಮತ್ತೆ ಮಳೆ ಕಾಲುರಿದೆ. ಮುಂಗಾರು ಮಳೆಯ ಕೊನೆ ಭಾಗವಾಗಿದ್ದು, ಜೋಕುಮಾರನ ಅಳಲು ನಂತರ ಇನ್ನಷ್ಟು ಜೋರು ಮಳೆಯಾಗುವ ನಿರೀಕ್ಷೆ ಇದೆ.
ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆ ಕಾಳುಗಟ್ಟುವ ಹಂತದಲ್ಲಿ ಮಳೆಯ ಅವಶ್ಯಕತೆ ಇದ್ದು, ಈ ಮಳೆಯಿಂದಾಗಿ ಈ ಬಾರಿ ಉತ್ತಮ ಇಳುವರಿ ಬರುವ ನಿರೀಕ್ಷೆಯನ್ನು ರೈತರು ಹೊಂದಿದ್ದಾರೆ. ದಾವಣಗೆರೆಯ ಸುತ್ತಮುತ್ತ, ಹರಿಹರ, ಮಲೇಬೆನ್ನೂರು ಭಾಗದಲ್ಲಿ ಮಳೆಯಾಗಿದೆ. ಚನ್ನಗಿರಿಯಲ್ಲಿ ಅರ್ಧ ಗಂಟೆ ಬಿರುಸಿನ ಮಳೆ ಸುರಿಯಿತು. ಅಜ್ಜಿಹಳ್ಳಿ, ಸುಣಿಗೆರೆ, ಚಿಕ್ಕೂಲಿಕೆರೆ, ನಾರಶೆಟ್ಟಿಹಳ್ಳಿ, ಗರಗ, ಮಾಚನಾಯಕನಹಳ್ಳಿ, ದಿಗ್ಗೇನಹಳ್ಳಿ, ಹೊನ್ನೇಬಾಗಿ, ಮುದ್ದೇನಹಳ್ಳಿ ಮುಂತಾದ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.