ದಾವಣಗೆರೆ: ಈ ಬಾರಿಯ ಮುಂಗಾರು ಕೈಕೊಟ್ಟ ಬಳಿಕ, ಇದೀಗ ರಾಜ್ಯದಲ್ಲಿ ಎರಡ್ಮೂರು ದಿನದಿಂದ ಹಿಂಗಾರು ಮಳೆ ಚುರುಕು ಪಡೆದಿದೆ. ದಾವಣಗೆರೆ ಜಿಲ್ಲೆಯಲ್ಲಿಯೂ ಉತ್ತಮ ಮಳೆಗಾಗುತ್ತಿದ್ದು, ಇಂದು ಸಂಜೆ ಜಿಲ್ಲೆಯ ಬಹುತೇಕ ಪ್ರದೇಶದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ.
ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದ ಕಂಗೆಟ್ಟಿದ್ದ ರೈತರಿಗೆ ಹಿಂಗಾರು ಮಳೆ ತುಸು ಹರ್ಷ ತಂದಿದೆ. ಬಹಳ ದಿನಗಳಿಂದ ಮಳೆ ಇಲ್ಲದೆ ಬಿಸಿಲಿನ ತಾಪದಿಂದ ಬಸವಳಿದಿದ್ದ ಇಳೆಗೆ ಸಂಜೆಯ ಮಳೆ ತಂಪೆರೆದಿದೆ. ಭದ್ರಾ ಕಾಲುವೆಯ ನೀರು ಅಚ್ಚುಕಟ್ಟು ಪ್ರದೇಶದ ಕೊನೆ ಭಾಗಕ್ಕೆ ತಲುಪದೇ ಫಸಲು ಒಣಗಲಾರಂಭಿಸಿದ್ದವು. ಇನ್ನೇನು ಫಸಲು ಕೈಗೆ ಸಿಗುವುದಿಲ್ಲ ಎಂದು ರೈತರು ಆತಂಕಗೊಂಡಿದ್ದರು. ಎರಡು ದಿನದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಭತ್ತ, ಅಡಿಕೆ, ತೆಂಗಿನ ತೋಟಗಳಿಗೆ ತಂಪೆರೆದಂತಾಗಿದೆ.
ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ, ಮಲೇಬೆನ್ನೂರು, ಸಂತೇಬೆನ್ನೂರು, ನ್ಯಾಮತಿ, ಶ್ಯಾಗಲೆ ಸೇರಿದಂತೆ ಎಲ್ಲೆಡೆ ಮಳೆಯಾಗಿದೆ. ತೀವ್ರ ಮಳೆ ಕೊರತೆ ಹಿನ್ನೆಲೆ ಬೋರ್ ವೆಲ್ ಗಳಲ್ಲಿ ನೀರಿನ ಪ್ರಮಾಣ ಕುಸಿದಿದ್ದು, ಈ ಬಾರಿಯ ಬೇಸಿಗೆ ಇನ್ನುಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಉತ್ತಮ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.



