ದಾವಣಗೆರೆ: ಜನರ ಕೈಗೆ ಸಿಗದ 15ಕ್ಕೂ ಹೆಚ್ಚು ದುರಹಂಕಾರಿ ಸಚಿವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಹೊನ್ನಾಳಿಯಲ್ಲಿ ಮಾತನಾಡಿದ ಅವರು, ನಾನು ತಪ್ಪು ಮಾಡಿದ್ದರೆ ಯಾವುದೇ ಶಿಕ್ಷೆ ಕೊಡಲಿ. ಅದಕ್ಕೆ ಸ್ವೀಕರಿಸುತ್ತೇನೆ. ಸುಳ್ಳು ಹೇಳುವ , ದುರಹಂಕಾರಿ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದೇನೆ ಎಂದರು.
ಸಿಎಂ ಬಸವರಾಜ್ ಬೊಮ್ಮಾಯಿ ಅವರೂ ಸ್ಪಂದಿಸುತ್ತಾರೆ. ಆದರೆ, ಕೆಲವು ಸಚಿವರು ಸ್ಪಂದನೆ ಮಾಡುತ್ತಿಲ್ಲ. ಸ್ಪಂದಿಸುವ ಹಾಗೂ ಸ್ಪಂದಿಸದ ಸಚಿವರ ಪಟ್ಟಿಯನ್ನೂ ನೀಡಿದ್ದೇನೆ. ಆದ್ರೆ ನಾನು ಲಿಖಿತ ದೂರು ಕೊಟ್ಟಿಲ್ಲ, ಕೊಡುವುದೂ ಇಲ್ಲ. ನಾನು ಕರೆ ಮಾಡಿ ಈಗಾಗಲೇ ಸಿಎಂ, ನಳೀನ್ ಕುಮಾರ್ ಕಟೀಲ್, ಅರುಣ್ ಸಿಂಗ್ ಅವರ ಜೊತೆ ಮಾತನಾಡಿದ್ದೇನೆ ಎಂದು ತಿಳಿಸಿದರು.
ನಾನು ಬಿಜೆಪಿ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ. ಸಚಿವ, ಶಾಸಕ ಸ್ಥಾನ ದೊಡ್ಡದಲ್ಲ. ಕೆಲ ಸಚಿವರು ಕೈಗೆ ಸಿಗ್ತಾ ಇಲ್ಲ, ಫೋನ್ ರಿಸೀವ್ ಮಾಡಲ್ಲ. ಮಾಡಿದರೂ ಸಚಿವರ ಆಪ್ತ ಸಹಾಯಕರು ಸ್ವೀಕರಿಸುತ್ತಾರೆ. ಏನಾದರೂ ಕೆಲಸಕ್ಕೆ ಪತ್ರ ಬರೆದರೆ ಕಾನೂನಾತ್ಮಕ ಪರಿಶೀಲನೆ ಮಾಡುತ್ತೇವೆ ಎಂಬ ಸಬೂಬು ಬರುತ್ತದೆ. ಇದು ಶಾಸಕರ ಕ್ಷೇತ್ರಕ್ಕೆ ಮಾಡಿದ ಅಪಮಾನ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೂ ಹೇಳಿದ್ದೇನೆ ಎಂದರು.
ನಮಗೆ ನೋವಿದೆ. ಏನಾದರೂ ಮಾತನಾಡಿದರೆ ಕೆಟ್ಟವರಾಗ್ತೇವೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಐದು ನಿಮಿಷದಲ್ಲಿ ಸಿಗುತ್ತಿದ್ದರು. ಬಸವರಾಜ್ ಬೊಮ್ಮಾಯಿ ಅವರು ಸಹ ಭೇಟಿಗೆ ಸಿಗುತ್ತಾರೆ. ಭೇಟಿಗೆ ಅವಕಾಶ ಕೇಳಿದರೆ ಬೊಮ್ಮಾಯಿ ಅವರು ತಕ್ಷಣವೇ ಬನ್ನಿ ಭೇಟಿ ಮಾಡಿ ಎನ್ನುತ್ತಾರೆ. ಯಡಿಯೂರಪ್ಪ, ಬೊಮ್ಮಾಯಿ, ಕೆಲ ಸಚಿವರು ಮಾತ್ರ ಕೈಗೆ ಸಿಗ್ತಾರೆ. ಕೈಗೆ ಸಿಗದ ಹದಿನೈದು ಸಚಿವರ ವಿರುದ್ಧ ರಾಜ್ಯಾಧ್ಯಕ್ಷರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದರು.



