ದಾವಣಗೆರೆ: ಬಿಜೆಪಿಯಿಂದ ಉಚ್ಚಾಟಿತ ಮಾಜಿ ಶಾಸಕ ಟಿ.ಗುರುಸಿದ್ದನಗೌಡ ಅವರನ್ನು ದಾವಣಗೆರೆ ನಿವಾಸದಲ್ಲಿ ಭೇಟಿ ಮಾಡಿದ ಮಾಜಿ ಸಚಿವ ರೇಣುಕಾಚಾರ್ಯ, ಬಿಜೆಪಿ ನಾಯಕರ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದರು.ಬಿಜೆಪಿ ಕಚೇರಿಯಲ್ಲಿ ಕುಳಿತವರಿಂದ ಒಂದು ಗ್ರಾಮ ಪಂಚಾಯಿತಿ ಚುನಾವಣೆ ಸಹ ಗೆಲ್ಲಲು ಆಗದು ಎಂದು ಕಿಡಿಕಾರಿದರು. ನಾಳೆ ಮಾಜಿ ಶಾಸಕ ಮಾಡಾಳು ವಿರುಪಾಕ್ಷಪ್ಪರನ್ನ ಭೇಟಿ ಮಾಡುತ್ತೇನೆ ನನ್ನನ್ನು ರೆಬೆಲ್ ರೇಣುಕಾಚಾರ್ಯ ಎಂದು ಯಾರು ಬೇಕಾದರೂ ಕರೆದುಕೊಳ್ಳಲಿ. ನಾನು ಹೆದರುವುದಿಲ್ಲ. ನನ್ನ ಮೇಲೆ ತೂಗುಗತ್ತಿ ತೂಗುತ್ತಾ ಇದೆ. ಆದರೆ, ನಾನು ಯಾವುದಕ್ಕೂ ಹೆದರಲ್ಲ. ನೋಟೀಸ್ ಕೊಟ್ಟರೆ ಉತ್ತರ ಕೋಡುವುದಿಲ್ಲ. ಬಿಎಸ್ವೈ ವಿರುದ್ದ ಮಾತನಾಡಿದವರ ಮೇಲೆ ಮೊದಲು ಪಕ್ಷ ಕ್ರಮ ಕೈಗೊಳ್ಳಲಿ ವಾಗ್ದಾಳಿ ನಡೆಸಿದರು.
ಪಕ್ಷ ಸೋತ ಮೇಲೆ ಈಗ ಎಲ್ಲರೂ ಯಡಿಯೂರಪ್ಪ ನಾಯಕತ್ವ ಎನ್ನುತ್ತಿದ್ದಾರೆ. ಬಿಎಸ್ವೈ ಕಡೆಗಣಿಸಿದ್ದೇ ಪಕ್ಷದ ಸೋಲಿಗೆ ಕಾರಣ. ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದಿದ್ದು ಯಡಿಯೂರಪ್ಪ. ಅವರನ್ನೇ ಅಧಿಕಾರದಿಂದ ಕೆಳಗಿಳಿಸಿದ್ದು ಅದರ ಪರಿಣಾಮ ಅನುಭವಿಸುತ್ತಿದ್ದಾರೆ ಎಂದು ಕಿಡಿಕಾರಿದರು
ದೇಶಕ್ಕೆ ಮೋದಿ. ರಾಜ್ಯಕ್ಕೆ ಯಡಿಯೂರಪ್ಪ. ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ನಾಯಕ. ವ್ಯವಸ್ಥಿತವಾಗಿ ಯಡಿಯೂರಪ್ಪ ಇಳಿಸುವ ಕೆಲಸ ಮಾಡಿದ್ದರು. ನಮ್ಮವರೇ ಆರೋಪ ಹೊರೆಸಿ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಆಡಿಯೋ ವೈರಲ್ ಆಗಿತ್ತು. ಅದರಲ್ಲಿ ಯಡಿಯೂರಪ್ಪ, ಜಗದೀಶ ಶೆಟ್ಟರ್ ಹಾಗೂ ಈಶ್ವರಪ್ಪ ಅವರಿಗೆ ಟಿಕೆಟ್ ಇಲ್ಲ ಎಂದು ಹೇಳಲಾಗಿತ್ತು. ಈಗ ಅದೇ ರೀತಿ ಮಾಡಲಾಗಿದೆ.
ತಾವು ರಾಜ್ಯದಲ್ಲಿ ಬಿಜೆಪಿಯನ್ನು ಬೂತ್ ಮಟ್ಟದಿಂದ ಕಟ್ಟಿ ಬೆಳೆಸಿದ್ದು ಯಾರಿಂದಲೂ ನನ್ನನ್ನು ಏನು ಮಾಡಲೂ ಆಗಲ್ಲ. ನಾನು ದಾವಣಗೆರೆ ಲೋಕಸಭೆ ಕ್ಷೇತ್ರದ ಟಿಕೆಟ್ ಚುನಾವಣೆ ಆಕಾಂಕ್ಷಿ. ಟಿಕೆಟ್ ಬಗ್ಗೆ ಕಾದು ನೋಡುತ್ತೇನೆ. ಟಿಕೆಟ್ ಸಿಗದೇ ಇದ್ದರೆ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ.
ಗುರುಸಿದ್ದನಗೌಡರು ಹಿರಿಯ ನಾಯಕರು. ಮಾಜಿ ಶಾಸಕರು. ದಾವಣಗೆರೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಿದ ಹಿರಿಯರು. 2004ರಲ್ಲಿ ಜಿಲ್ಲೆಯಲ್ಲಿ ಎಸ್, ಎ. ರವೀಂದ್ರನಾಥ್, ಗುರುಸಿದ್ದನಗೌಡರು ಹಾಗೂ ನಾನು ಆಯ್ಕೆಯಾಗಿದ್ದೆವು. ಉತ್ತಮ ಕೆಲಸ ಮಾಡಿದ್ದೆವು. ಆದ್ರೆ, ಯಾವುದೇ ನೋಟಿಸ್ ನೀಡದೇ ಗುರುಸಿದ್ದನಗೌಡ ಹಾಗೂ ಪುತ್ರರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿರುವುದು ಆಶ್ಚರ್ಯ ತಂದಿದೆ ಎಂದರು.
ಗುರುಸಿದ್ದನಗೌಡರು ಕೋಟ್ಯಂತರ ರೂಪಾಯಿ ಅನುದಾನ ತಂದು ಕೆಲಸ ಮಾಡಿದ್ರು. ಗುರುಸಿದ್ದನಗೌಡರು, ಕುಟುಂಬದ ಸದಸ್ಯರನ್ನು ಪಕ್ಷ ವಿರೋಧಿ ಚಟುವಟಿಕೆ ಹಣೆಪಟ್ಟಿ ಕಟ್ಟಿ ನೊಟೀಸ್ ಕೊಡದೇ ಉಚ್ಚಾಟನೆ ಮಾಡಿದ್ದಾರೆ. ಏಕಾಏಕಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂಬ ಹಣೆಪಟ್ಟಿ ಕಟ್ಟಿರುವುದು ಸರಿಯಲ್ಲ. ಚುನಾವಣೆಯಲ್ಲಿ ಅಭ್ಯರ್ಥಿಗಳ ವಿರುದ್ಧವಾಗಿ ಕೆಲಸ ಮಾಡಿದರೆ ದಾಖಲೆ ಇದ್ದರೆ ನೊಟೀಸ್ ಕೊಡಬೇಕು. ಏಳು ದಿನಗಳ ಕಾಲಾವಕಾಶ ಕೊಡಬೇಕು. ಜಿಲ್ಲಾ ಘಟಕಕ್ಕೆ ಉಚ್ಚಾಟನೆ ಮಾಡುವ ಅಧಿಕಾರ ಇಲ್ಲದಿದ್ದರೂ ಉದ್ದೇಶ ಪೂರ್ವಕವಾಗಿಯೇ ಈ ಕ್ರಮ ಜರುಗಿಸಲಾಗಿದೆ.
ಗುರುಸಿದ್ದನಗೌಡರ ಪುತ್ರ 2024ರ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೇಳಿದ್ದಾರೆ. ನೀಡಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆಯಾಗಬೇಕಿತ್ತು. ರಾಜಕೀಯವಾಗಿ ಕುಟುಂಬ ಸದಸ್ಯರು ಬೆಳೆಯಬಾರದು. ಮುಗಿಸಬೇಕು ಎಂಬುದು ಈ ಕ್ರಮ ಕೈಗೊಂಡಿರುವ ವಿಚಾರದಲ್ಲಿ ಕಾಣುತ್ತಿದೆ. ಗುರುಸಿದ್ದನಗೌಡರ ಅಭಿಮಾನಿಯಾಗಿ ನಾನು ಇದನ್ನು ಖಂಡಿಸುತ್ತೇನೆ ಎಂದರು.