ದಾವಣಗೆರೆ: ಸಚಿವ ಸಂಪುಟ ವಿಸ್ತರಣೆಗೆ ನಾಳೆ ಸಂಜೆ 04 ಗಂಟೆಗೆ ಸಮಯ ನಿರ್ಧಾರವಾಗಿದೆ. 7 ನೂತನ ಸಚಿವರು ನಾಳೆ (ಜ.13) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ, ಯಾರು ಸಚಿವರಾಗಿ ಪ್ರಮಾಣ ಸ್ವೀಕರಿಸುತ್ತಾರೆ ಎಂಬ ಬಗ್ಗೆ ಸಿಎಂ ಇನ್ನೂ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆದರೆ, ಸಚಿವ ಆಕಾಂಕ್ಷಿಯಾಗಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರಿಗೆ ಯಾವುದೇ ಕರೆ ಬಾರದ ಹಿನ್ನೆಲೆ ಇಂದು ಫುಲ್ ಟೆನ್ಷನ್ ನಲ್ಲಿದ್ದರು.
ಇಂದು ಹೊನ್ನಾಳಿ, ನ್ಯಾಮತಿಯಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್, ಸಂಸದ ಜಿ.ಎಂ. ಸಿದ್ದೇಶ್ವರ ಭಾಗಿಯಾಗಿದ್ದರು. ಆದರೆ, ಸಿಎಂ ಕಡೆಯಿಂದ ಯಾವುದೇ ಕರೆ ಬಾರದ ಹಿನ್ನೆಲೆ ರೇಣುಕಾರ್ಯ ಅವರು ಟೆನ್ಷನ್ ನಲ್ಲಿ ಇದ್ದರು. ಕಾರ್ಯಕ್ರಮ ಮಧ್ಯೆ ಫೋನಿನಲ್ಲಿ ಬ್ಯುಸಿಯಾಗಿದ್ದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಹಿತಿ ಇಲ್ಲ. ನಾಳೆ ಸಂಪುಟ ವಿಸ್ತರಣೆ ಎನ್ನುವ ಬಗ್ಗೆ ಮಾಧ್ಯಮದಿಂದ ತಿಳಿದಿದ್ದೇನೆ. ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಗೊಂದು ಸಚಿವ ಸ್ಥಾನ ನೀಡಬೇಕು ಎಂಬುದು ಜನರ ಮತ್ತು ಕಾರ್ಯಕರ್ತ ಒತ್ತಾಯವಾಗಿತ್ತು. ಆದರೆ, ಇದುವರೆಗೆ ನನಗೆ ಯಾವುದೇ ಕರೆ ಬಂದಿಲ್ಲ. ಸಂಜೆ ವರೆಗೆ ಕಾದು ನೋಡುತ್ತೇನೆ. ನಾಳೆ ಬೆಳಗ್ಗೆ ಕೋರ್ಟ್ ಇದೆ. ಹೀಗಾಗಿ ಬೆಂಗಳೂರಿಗೆ ಹೋಗುತ್ತೇನೆ. ನಂತರ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದರು.



