ದಾವಣಗೆರೆ: ಸಿದ್ದೇಶ್ವರ್ ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಸಲ ಗೆದ್ದು, ಒಂದು ಸಲ ಸೋತಿದ್ದಕ್ಕೆ ಆತಂಕ ಪಡುವ ಅಗತ್ಯ ಇಲ್ಲ. ಸ್ವಲ್ಪ ದಿನ ಯಾವುದಾದರೂ ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ. ಚುನಾವಣೆಯಲ್ಲಿ ಸೋಲು ಗೆಲುವು ಮಾಮೂಲು, ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಗೆ ಟಾಂಗ್ ನೀಡಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಗ್ರಾಮದಲ್ಲಿ ಪ್ರಚಾರಕ್ಕೆ ಬಂದಿದ್ದರು. ನಮ್ಮ ಮನೆಗೂ ಬಂದು ಮತಯಾಚನೆ ಮಾಡಿದ್ದಾರೆ. ನಾವು ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದೇವೆ ಅಂದರೆ ಏನು ಅರ್ಥ ಎಂದರು.
ನಾನು ಸಹ ಐದು ಸಲ ಗೆದ್ದು, ಐದು ಸಲ ಸೋತಿದ್ದೇನೆ. ನಾನೂ ಸೋತಾಗ ಎಲ್ಲರ ಮೇಲೆ ಆರೋಪ ಮಾಡಿಲ್ಲ. ಹಿಂದೆಯಲ್ಲ ಬಿಜೆಪಿ ಪಕ್ಷದ ನಾಯಕರು ಚುನಾವಣಾ ಪ್ರಚಾರಕ್ಕೆ ಹೋದಾಗ ಕಲ್ಲು, ಕಣಗ ತೆಗೆದುಕೊಂಡು ಹೊಡೆಯಲು ಬರುತ್ತಿದ್ದರು. ಈಗ ಆ ಪರಿಸ್ಥಿತಿ ಇಲ್ಲ. ಈ ಚುನಾವಣೆಯಲ್ಲಿ ನೀವುಸೋತಿದ್ದೀರಿ , ಮತ್ತೆ ಕಾರ್ಯಕರ್ತರ ಬಳಿ ಹೋಗಿ ನಿಮ್ಮ ಮಕ್ಕಳನ್ನಾದರು ಜನರು ಗೆಲ್ಲಿಸುತ್ತಾರೆ ಎಂದರು.
ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರನ್ನು ಹೊಸದುರ್ಗದಲ್ಲಿ ಸಾಮಾನ್ಯ ಸೊಸೈಟಿ ಅಧ್ಯಕ್ಷ ಸೋಲಿಸಿದ್ದ. ಹರಿಹರ ಹಿರಿಯ ರಾಜಕಾರಣಿ ಸಿದ್ದವೀರಪ್ಪ ಅವರನ್ನ ಅದೇ ತಾನೇ ವಕೀಲಿ ವೃತ್ತಿಗೆ ಕಾಲಿಟ್ಟ ಯುವಕ ಸೋಲಿಸಿದ್ದ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದರು.



