ದಾವಣಗೆರೆ: ಸಂಸದ ಜಿ.ಎಂ. ಸಿದ್ದೇಶ್ವರ ಮೋದಿ ಫೋಟೋ ಇಟ್ಟುಕೊಂಡು ಚುನಾವಣೆಯಲ್ಲಿ ಗೆಲ್ಲುವುದಲ್ಲ. ಅವರ ಫೋಟೋ ಬಿಟ್ಟು ಲೋಕಸಭಾ ಚುನಾವಣೆಗೆ ವೈಯಕ್ತಿಕವಾಗಿ ಸ್ಪರ್ಧಿಸಲಿ. ನಾನು ಪಕ್ಷ ಬಿಟ್ಟು ಸ್ಪರ್ಧಿಸಲು ಸಿದ್ಧವಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕಾಂಗ್ರೆಸ್ ಕಟ್ಟಾಭಿಮಾನಿ. ನಮ್ಮ ಇಡೀ ಕುಟುಂಬವೇ ಕಾಂಗ್ರೆಸ್. ಯಾವುದೇ ಪಕ್ಷ ಬೆಂಬಲ ಇಲ್ಲದೆ ವೈಯಕ್ತಿಕವಾಗಿ ನಾನು ಲೋಕಸಭೆಗೆ ಸ್ಪರ್ಧಿಸುತ್ತೇನೆ. ನನಗೆ ಯಾರ ಆಶೀರ್ವಾದವೂ ಬೇಡ, ಜನರ ಆಶೀರ್ವಾದವೊಂದು ಇದ್ರೆ ಸಾಕು. ಅವರು ಸ್ವತಂತ್ರವಾಗಿ ಸ್ಪರ್ಧಿಸಲು ಸಿದ್ಧ ಇದ್ದಾರೇನು ಕೇಳಿ ಎಂದರು.
ನಾನು ಸಿದ್ದೇಶ್ವರನಿಂದ ಸಂಸ್ಕಾರ ಕಲಿಯಬೇಕಿಲ್ಲ. ನಮ್ಮ ಅಪ್ಪ, ಅಜ್ಜ ಹಾಗೂ ಅವ್ವ ನಮ್ಮವ್ವ ಸಂಸ್ಕಾರ ಕಲಿಸಿದ್ದಾರೆ. ಬೇಕಾದರೆ ನಾನೇ ಕಲಿಸಿಕೊಡುವೆ. ನಾನು, ನಮ್ಮ ಅಪ್ಪ ಈವರೆಗೆ ಬಡ್ಡಿ ವ್ಯವಹಾರ ಮಾಡಿಲ್ಲ. ಅವರ ಕುಟುಂಬದ ಜೊತೆ ಕೈಗಡ ವ್ಯವಹಾರವಿತ್ತು ಅಷ್ಟೇ. ಅವರು ಒಂದಕ್ಕೆ ನಾಲ್ಕು ರೂಪಾಯಿ ಬಡ್ಡಿ ವಸೂಲಿ ಮಾಡಿ ಊರು ಹಾಳುಮಾಡಿದ್ದಾರೆ ಎಂದರು.
ಹಳೇ ದಾವಣಗೆರೆಯಲ್ಲಿ ಉದ್ಯಾನವನ್ನು ನೋಂದಣಿ ಮಾಡಿಕೊಟ್ಟಿರುವ ಪ್ರಕರಣ ಹೊರಬಂದಿದ್ದು, ಪಾಲಿಕೆ ಸದಸ್ಯರೊಬ್ಬರ ಅಕ್ಕ ಅವರ ಅಪ್ಪ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. 2021ರಲ್ಲಿ ಉದ್ಯಾನದ ಜಾಗವನ್ನು ಖಾತೆ ಮಾಡಿ 2022ರಲ್ಲಿ ನೋಂದಣಿ ಮಾಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಸಬ್ ರಿಜಿಸ್ಟರ್ ಮೇಲೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಕಾರಣ. ಗಣಿಗಾರಿಕೆಯಲ್ಲಿ ನಾವು ಏನು ಮಾಡಿಲ್ಲ ಎಂದು ಹೇಳುವ ಅವರು, 220 ಕೋಟಿ ಅಕ್ರಮ ದಾಖಲೆ ಇದೆ. ಬೇಕಾದರೆ ಚರ್ಚೆಗೆ ಬರಲಿ ಎಂದರು.



