ದಾವಣಗೆರೆ: ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಟಿಕೆಟ್ ಘೋಷಣೆಯೇ ಒಂದು ರೀತಿ ಕಗ್ಗಂಟಾಗಿದೆ.
ಟಿಕೆಟ್ ಸ್ಪಷ್ಟವಾಗಿ ಘೋಷಿಸಿ
ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್. ಮಲ್ಲಿಕಾರ್ಜುನ ಇಂದು (ಮಾ.17) ಹಾಡಿದ ಒಂದು ಮಾತು ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ಕೊಟ್ಟಂತೆ ಇದೆ.ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆ ಸಂಬಂಧ ಕರೆದಿದ್ದ ಜಿಲ್ಲಾ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಹಾಡಿದ ಒಂದು ಮಾತು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 2008 ಬಿ ಫಾರಂ ಹರಿದ ಘಟನೆ ನೆನೆದ ಸಚಿವ ಮಲ್ಲಿಕಾರ್ಜುನ, ಇಂತಹ ಘಟನೆ ಮರುಕಳಿಸದಿರಲಿ ಎಂದು ಸಮಿತಿ ಮುಂದೆ ಮನವಿ ಮಾಡಿದ್ದು, ಟಿಕೆಟ್ ಸ್ಪಷ್ಟವಾಗಿ ಘೋಷಿಸಿ ಎಂದು ಆಗ್ರಹಿಸಿದ್ದಾರೆ.
ಬಿ ಫಾರಂ ಹರಿದ ಘಟನೆ ಬಗ್ಗೆ ಸಚಿವರು ಹೇಳಿದ್ದೇನು….?
2008ರಲ್ಲಿ ವಿಧಾನಸಭೆ ಚುನಾವಣೆ ವೇಳೆ ಹೆಲಿಕಾಪ್ಟರ್ ನಲ್ಲಿ ಟಿಕೆಟ್ ತಂದಾಗ ಆದಂತೆ ಮತ್ತೆ ಆಗಬಾರದು. ಈಗಲೇ ಘೋಷಣೆ ಮಾಡಿ ಹೋಗಿ. ಹೇಳುವುದು ಒಂದು, ಮಾಡುವುದು ಇನ್ನೊಂದು ಆಗಬಾರದು. ಈ ವೇಳೆ 2008 ರಲ್ಲಿ ನಡೆದ ಘಟನೆಯಲ್ಲಿ ನನ್ನದು ತಪ್ಪಿಲ್ಲ. ಸೈಯದ್ ಸೈಫುಲ್ಲಾ ಸಾಹೇಬರದ್ದು ತಪ್ಪಿಲ್ಲ. ಆದರೆ ಮಾತನಾಡುವವರಿಗೆ ಆಸ್ಪದ ಕೊಟ್ಟಂತಾಯಿತು. ಸೈಯದ್ ಸೈಫುಲ್ಲಾ ಸಾಹೇಬರು ನನ್ನ ಜೊತೆ ಬಂದರು, ನಾನು ಅವರ ಜೊತೆ ಹೋದೆ. ಅವರಿಗೆ ಏನು ತಿಳಿಯಿತೋ ಏನು ಬಿ ಫಾರಂನ ನನ್ನ ಹೆಸರು ತಿದ್ದಿದರು. ಯಾರೋ ನಾನೇ ಬಿ ಘಾರಂ ಹರಿದು ಹಾಕಿ, ನಾಮಪತ್ರ ಸಲ್ಲಿಸಿದೆ ಎಂದು ಸುದ್ದಿ ಹಬ್ಬಿಸಿದರು. ಈ ಘಟನೆ ಬಗ್ಗೆ ಸೈಫುಲ್ಲಾ ಸಾಹೇಬರಿಗೆ ನೀವೇ ಆಗ ಏನಾಯ್ತು ಎಂದು ಹೇಳಬೇಕು ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಜಾತಿ ಇಲ್ಲ. ಇಲ್ಲಿ ಎಲ್ಲರೂ ಒಂದೇ ಜಾತಿ. ಅದು, ಕಾಂಗ್ರೆಸ್ ಜಾತಿ. ಕೆಲವರು ಜಾತಿ, ಜಾತಿ ಎತ್ತಿಕಟ್ಟಿ ಬೇಳೆ ಬೇಯಿಸಿಕೊಳ್ಳುವವರು ಇದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಚ್ಚರಿಕೆಯಿಂದ ಅಭ್ಯರ್ಥಿ ಆಯ್ಕೆ ಮಾಡಬೇಕಿದೆ ಎಂದರು. ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಬಗ್ಗೆ ಯಾರ್ಯಾರದ್ದೋ ಹೇಳಿಕೆ ನೋಡಿದೆ. ಇದೆಲ್ಲಾ ಸರಿಯಲ್ಲ. ಎಲ್ಲರು ಒಟ್ಟಾಗಿ ಒಳ್ಳೇ ಅಭ್ಯರ್ಥಿ ಆಯ್ಕೆ ಮಾಡಿ ಗೆಲ್ಲಿಸಬೇಕಿದೆ ಎಂದು ಹೇಳಿದರು.
ಒಂದು ಬಣ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂದರೆ, ಮತ್ತೊಂದು ಬಣ ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದೆ. ಈ ಎರಡು ಬಣ ಬಡಿದಾಟ ಕಂಡು ಚುನಾವಣಾ ಉಸ್ತುವಾರಿ ಸಮಿತಿ ಹೈರಾಣವಾಯಿತು.



