ದಾವಣಗೆರೆ: ಜಿಲ್ಲಾ ಪೊಲೀಸ್ ಹಾಗೂ ಎಸ್ ಎಸ್ ಕೇರ್ ಟ್ರಸ್ಟ್ ಸಹಯೋಗದೊಂದಿಗೆ ರಸ್ತೆ ಸುರಕ್ಷಾ ಸಪ್ತಾಹ 2024ರ ಅಂಗವಾಗಿ ಆಟೋ ಚಾಲಕರುಗಳಿಗೆ ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಪಿ.ಜೆ. ಬಡಾವಣೆಯ ಡಿಎಆರ್ ಕಛೇರಿಯ ಆವರಣದಲ್ಲಿ ಆಯೋಜಿಸಲಾಗಿತ್ತು.
ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಎಸ್ಪಿ ಉಮಾ ಪ್ರಶಾಂತ್ ಹಾಗೂ ಎಸ್ ಎಸ್ ಕೇರ ಟ್ರಸ್ಟ್ ಪ್ರಭಾ ಮಲ್ಲಿಕಾರ್ಜುನ್ ಉಧ್ಘಾಟಿಸಿದರು.ನಂತರ ಮಾತನಾಡಿದ ಪ್ರಭಾ ಮಲ್ಲಿಕಾರ್ಜುನ, ಶಿಬಿರದಲ್ಲಿ ವೈದ್ಯರು, ನೇತ್ರಶಾಸ್ತ್ರಜ್ಞರು, ಮೂಳೆ ತಜ್ಞರು, ಚರ್ಮರೋಗ ತಜ್ಞರು ಮತ್ತು ಶ್ವಾಸಕೋಶ ಶಾಸ್ತ್ರಜ್ಞರು ಆರೋಗ್ಯ ತಪಾಸಣೆಗೆ ಲಭ್ಯವಿರುರುತ್ತಾರೆ. ರಕ್ತದ ಸಕ್ಕರೆಯ ಅಂದಾಜು, ರಕ್ತದೊತ್ತಡ ಮಾಪನ, ಇಸಿಜಿ ಮತ್ತು ಉಚಿತ ಔಷಧಗಳನ್ನು ಶಿಬಿರದಲ್ಲಿ ಒದಗಿಸಲಾಗಿದೆ. ಶಿಬಿರದಲ್ಲಿ ಪ್ರಥಮ ಚಿಕಿತ್ಸೆ, ಅಪಘಾತಗಳು ಮತ್ತು ತುರ್ತು ಪರಿಸ್ಥಿತಿಗಳ ಕುರಿತು ಆರೋಗ್ಯ ಶಿಕ್ಷಣವನ್ನು ನೀಡಲಾಗುತ್ತದೆ. ಚಾಲಕರು ಈ ಸೇವೆಗಳನ್ನು ಪಡೆದು ಶಿಬಿರದ ಇದರ ಸದುಯೋಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ಆಟೋ ಚಾಲಕರು ಆರೋಗ್ಯಕರ ಜೀವನ ಶೈಲಿಯನ್ನು ರೂಡಿಸಿಕೊಳ್ಳಬೇಕು, ಪ್ರತಿದಿನ ನಡಿಗೆ, ವ್ಯಾಯಾಮ, ಆರೋಗ್ಯಕರ ಊಟವನ್ನು ಮಾಡಬೇಕು. ಕುಟುಂಬದ ಜವಾಬ್ದಾರಿ ನಿಮ್ಮ ಮೇಲೆ ಇರುತ್ತದೆ. ಹಾಗಾಗಿ ಆಟೋ ಚಾಲಕರು ಉತ್ತಮ ಆರೋಗ್ಯಕರ ಜೀವನ ಶೈಲಿಯನ್ನು ರೂಡಿಸಿಕೊಳ್ಳಬೇಕು. ಇದರ ಜೊತೆಗೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ, ರಸ್ತೆ ಸುರಕ್ಷಾ ಸಪ್ತಾಹ 2024 ರ ಅಂಗವಾಗಿ ದಾವಣಗೆರೆಯ ಆಟೋ ಚಾಲಕರುಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೋಂಡಿದ್ದು, ಇದರ ಸಧುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್, ಬಿಪಿ, ಹೈಪರ್ ಟೆನ್ಷನ್ ಎಲ್ಲರಲ್ಲೂ ಹೆಚ್ಚಾಗುತ್ತಿದೆ. ಎಲ್ಲರಿಗೂ ಒತ್ತಡ ಇರುತ್ತದೆ. ನಿಮ್ಮ ಒತ್ತಡಗಳನ್ನು ಬದಿಗೊತ್ತಿ ಆರೋಗ್ಯದ ಕಡೆ ಆಟೋ ಚಾಲಕರು ಗಮನ ಹರಿಸಬೇಕು. ನಿಮ್ಮ ಆರೋಗ್ಯ ಚನ್ನಾಗಿದ್ದರೆ ನಿಮ್ಮ ಕುಟುಂಬದ ಆರೋಗ್ಯ ಚನ್ನಾಗಿರುತ್ತದೆ ಎಂದು ತಿಳಿಸಿದರು, ಜೊತೆಗೆ ಮುಖ್ಯವಾಗಿ ತಾವುಗಳು ಆಟೋ ಚಾಲನೆ ಮಾಡುವಾಗ ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ರಸ್ತೆ ಸುರಕ್ಷತಾ ನಿಯಮಗಳಿರುವುದು ಜೀವ ರಕ್ಷಣೆಗಾಗಿ, ಅಪಘಾತಗಳ ತಡೆಗಾಗಿ. ಸಂಚಾರ ನಿಯಮಗಳನ್ನು ಪಾಲಿಸುವುದು ಪ್ರತಿಯೋಬ್ಬ ನಾಗರೀಕರ ಜವಾಬ್ದಾರಿ ಆಗಿರುತ್ತದೆ ಎಂದು ತಿಳಿಸಿದರು. ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 200 ಕ್ಕೂ ಹೆಚ್ಚು ಆಟೋ ಚಾಲಕರು ಪಾಲ್ಗೋಂಡು ವೈಧ್ಯಯಕೀಯ ತಪಾಸಣೆ ಮಾಡಿಸಿಕೊಂಡರು.
ಡಿವೈಎಸ್ಪಿ ಪಿ ಬಿ ಪ್ರಕಾಶ್ ರವರು ಸ್ವಾಗತಿದರು. ನಿರೂಪಣೆಯನ್ನು ಸಂಚಾರ ಪೊಲೀಸ್ ನಿರೀಕ್ಷಕ ನಲವಾಗಲು ಮಂಜುನಾಥ್ ಮಾಡಿದರು. ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಸ್ತೆ ಸುರಕ್ಷತೆ ಮತ್ತು ಆರೋಗ್ಯ ಕಾಳಜಿ ಬಗ್ಗೆ ತಿಳಿಸಿದರು. ವಂದನಾರ್ಪಣೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ ಜಿ ರವರು ನೆರೆವೇರಿಸಿದರು. ಕಾರ್ಯಾಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ ಜಿ, ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ರವರು, ದಾವಣಗೆರೆ ಗ್ರಾಮಂತರ ಡಿವೈಎಸ್ಪಿ ಬಸವರಾಜ್ ಬಿ ಎಸ್ , ಪ್ರೋ ಡಿವೈಎಸ್ಪಿ ಯಶವಂತ್ ರವರು ಪೊಲೀಸ್ ನಿರೀಕ್ಷಕರಾದ ನಲವಾಗಲು ಮಂಜುನಾಥ, ಮಲ್ಲಮ್ಮ ಚೌಬೆ, ಇಮ್ರಾನ್ ಬೇಗ್ ಹಾಗೂ ಪಿಎಸ್ಐ ಶೈಲಜಾ ರವರು ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.