ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಆಡಳಿತದಲ್ಲಿರೋ ನಾಯಕರಿಗೆ ಬೀದಿ ಲೈಟ್ ಬರ್ನ್ ಆದ್ರೆ, ಹೊಸ ಲೈಟ್ ಹಾಕೋ ಯೋಗ್ಯತೆ ಇಲ್ಲ ಎಂದು ಮಾಜಿ ಸಚಿವ ಎಸ್ . ಎಸ್ ಮಲ್ಲಿಕಾರ್ಜುನ ಕಿಡಿಕಾರಿದರು.
ದಾವಣಗೆರೆ ಮಹಾನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ಬರಲು ಸಂಸದ ಜಿ.ಎಂ ಸಿದ್ದೇಶ್ವರ್ ಕಾರಣ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ನಿನ್ನೆ ನಡೆದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಗುದ್ದಲಿ ಪೂಜೆ ಸಮಾರಂಭದಲ್ಲಿ ಹೇಳಿದಕ್ಕೆ ಎಸ್. ಎಸ್. ಮಲ್ಲಿಕಾರ್ಜುನ ಈ ರೀತಿ ಪ್ರತಿಕ್ರಿಯೆ ನೀಡಿದರು.
ಪಾಲಿಕೆ ಆಡಳಿತದಲ್ಲಿರೋ ನಾಯಕರಿಗೆ ಬೀದಿ ಲೈಟ್ ಬರ್ನ್ ಆದ್ರೆ, ಹೊಸ ಲೈಟ್ ಹಾಕೋ ಯೋಗ್ಯತೆ ಇಲ್ಲ. ಕನಿಷ್ಟ ಒಂದು ಲೋಡ್ ಮಣ್ಣು ತರಲು ಇವರಿಂದ ಆಗಲ್ಲ. ಲಕ್ಷ್ಮಣ ಸವದಿಗೇನು ಗೊತ್ತು ದಾವಣಗೆರೆ ವಿಚಾರ. ಅವರು ತಮ್ಮ ಜಿಲ್ಲೆದು ನೋಡಿಕೊಳ್ಳಲಿ ಎಂದು ಕಿಡಿಕಾರಿದರು.
ನಮ್ಮ ಸರ್ಕಾರದಲ್ಲಿ ಘೋಷಿಸಿದ ಯೋಜನೆಗಳನ್ನು ಬಿಜೆಪಿ ಅವರು ಈಗ ಗುದ್ದಲಿ ಪೂಜೆ ಮಾಡುತ್ತಿದ್ದಾರೆ. ದಾವಣಗೆರೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ರಾಮಲಿಂಗಾರಡ್ಡಿ ಅವರು ಸಾರಿಗೆ ಸಚಿವರಾಗಿದ್ದಾಗಲೇ ಭೂಮಿ ಪೂಜೆ ಮಾಡಿದ್ದೇವು. ಈಗ ಮತ್ತೊಮ್ಮೆ ಯೋಜನೆಗೆ ಭೂಮಿ ಪೂಜೆ ಮಾಡಿದ್ದಾರೆ. ಮಾಡಲಿ ಎತ್ತ ಆದ್ರೇನು ಅಭಿವೃದ್ಧಿ ಕೆಲಸ ಆದ್ರೆ ಸಾಕು ಎಂದರು.
ಇನ್ನೂ ನಾಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ರೈತ ದಿವಾಸ್ ಕಾರ್ಯಕ್ರಮ ಕೈಗೊಂಡಿದ್ದಾರೆ. ಹೀಗಾಗಿ ದಾವಣಗೆರೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗಿಯಾಗಬೇಕಿದೆ ಎಂದರು.



