ದಾವಣಗೆರೆ: ದಾವಣಗೆರೆಯ ಬೆಣ್ಣೆ ದೋಸೆ ಬಾಯಲ್ಲಿ ನೀರೂರಿಸುತ್ತದೆ. ಜೂನ್ 4 ರಂದು ದಾವಣಗೆರೆ ಲೋಕಸಭಾ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಗೆಲುವಿನೊಂದಿಗೆ ದಾವಣೆಗೆರೆ ಬೆಣ್ಣೆ ದೋಸೆ ಸವಿಯಲು ರೆಡಿಯಾಗಿ. ಇಂಡಿಯಾ ಒಕ್ಕೂಟದಲ್ಲಿ ನಾಯಕರ ನಡುವೆ ಹೊಂದಾಣಿಕೆ ಇಲ್ಲ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಒಂದೊಂದು ವರ್ಷ ಒಂದೊಂದು ಪ್ರಧಾನ ಮಂತ್ರಿಗಳು ಆಡಳಿತ ನಡೆಸುತ್ತಿದ್ದಾರೆ. ನಿಮ್ಮ ಅಮೂಲ್ಯ ಮತವನ್ನು ಹಾಳು ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ದಾವಣಗೆರೆಯಲ್ಲಿ ಆಯೋಜಿಸಿದ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಇಷ್ಟು ವರ್ಷ ಸೋಲಿಗೆ ಇವಿಎಂ ಮೇಲೆ ಆರೋಪ ಮಾಡಿ ಕಾರ್ಯಕರ್ತರನ್ನು ಸಮಾಧಾನ ಪಡಿಸುತ್ತಿತ್ತು. ಇದೀಗ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಈ ಕಾರಣ ಮುಗಿದ ಅಧ್ಯಾಯ. ಹೀಗಾಗಿ ಕಾಂಗ್ರೆಸ್ ಸೋಲಿಗೆ ಹೊಸ ಆರೋಪ ಮಾಡಲು ಕಾರಣ ಹುಡುಕುತ್ತಿದೆ. ಕಾಂಗ್ರೆಸ್ ಗೂ ದೆಹಲಿಗೂ ಸಂಬಂಧ ಮುಗಿದು ಹೋಗಿದೆ ಎಂದರು.
ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ ಮೋದಿ, ತಾಯಿ ಭುವನೇಶ್ವರಿ, ಈ ಕ್ಷೇತ್ರದ ಎಲ್ಲಾ ಮಠಗಳಿಗೆ ಭಕ್ತಿಪೂರ್ವಕ ನಮನ ಸಲ್ಲಿಸುತ್ತೇನೆ ಎಂದರು. ನಿಮ್ಮ ಪ್ರೀತಿಗೆ ನಾನು ಚಿರಋಣಿ ಎಂದು ಮೋದಿಹೇಳಿದ್ದಾರೆ. ಏಪ್ರಿಲ್ 26ರಂದು ಕರ್ನಾಟಕದಲ್ಲಿ ಮೊದಲ ಮತದಾನ ನಡೆದಿದೆ. ಕರ್ನಾಟಕದ ಮಹಿಳಾ ಮತದಾರರು ಸೇರಿದಂತೆ ಎಲ್ಲಾ ಮತದಾರರು ಅಭೂತಪೂರ್ವವಾಗಿ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಇದು ಕಾಂಗ್ರೆಸ್ ನಿದ್ದೆಗೆಡಿಸಿದೆ. ಕರ್ನಾಟಕದ ಜನತೆ ಕೂಡ ಕಾಂಗ್ರೆಸ್ ಪಕ್ಷಕ್ಕೆ ಮುಕ್ತಿ ಕೊಡಬೇಕಿದೆ ಎಂದರು.
ದಾವಣಗೆರೆ ಮತದಾರರು ಕೂಡ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಒಳಗಿನ ಆತಂರಿಕ ಯುದ್ಧ ರಸ್ತೆಗೆ ಬರಲಿದೆ. ಈ ದಿನ ದೂರವಿಲ್ಲ. ಕಳೆದ 10 ವರ್ಷದಲ್ಲಿ ಈ ದೇಶದ ಜನರು ಪ್ರಧಾನಿ ಮೋದಿಯನ್ನು ಇಂಚಿಂಚು ವಿಮರ್ಷಿಸಿದ್ದಾರೆ. ಇದೀಗ ಮೋದಿ ಯಾರು, ಮೋದಿ ಆಡಳಿತ ಏನು? ಅನ್ನೋದು ಗೊತ್ತಾಗಿದೆ. ನನಗೆ 2014ರಲ್ಲಿ, 2019ರಲ್ಲಿ ನೋಡದ ಈ ಪ್ರೀತಿ, ವಿಶ್ವಾಸವನ್ನು ಈಗ ನಾನು ನಿಮ್ಮಲ್ಲಿ ನೋಡುತ್ತಿದ್ದೇನೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ಕಾಂಗ್ರೆಸ್ ಕನಿಷ್ಠ ಒಂದು ಸ್ಥಾನವನ್ನು ಗೆಲ್ಲುವ ಸಾಧ್ಯತೆ ಇಲ್ಲ. ಕಾಂಗ್ರೆಸ್ ದೆಹಲಿಯಿಂದ ದೂರವಾಗಿದ್ದು, ಕರ್ನಾಟಕ ಜನತೆ ಕೂಡ ಕಾಂಗ್ರೆಸ್ ಗೆ ಮುಕ್ತಿ ಕೊಡಬೇಕಿದೆ. ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಕಾಂಗ್ರೆಸ್ ಹಂತ ಹಂತವಾಗಿ ಅವಸಾನ ಕಾಣುತ್ತಿದೆ ಎಂದು ಟೀಕಿಸಿದ್ದಾರೆ.