ದಾವಣಗೆರೆ: ನಾನು ಬೇಕು ಎನ್ನುವವರು ವಿನಯ್ ಗೆ ಓಟ್ ಹಾಕಬೇಡಿ. ಬಿಜೆಪಿಗೆ ಲಾಭ ಮಾಡಲು ಭೈರತಿ ಬಸವರಾಜು ಕುಮ್ಮಕ್ಕುನಿಂದ ವಿನಯ್ ಸ್ಫರ್ಧಿಸಿದ್ದಾನೆ. ನನ್ನ ಮತ್ತು ಕನಕಪೀಠದ ನಿರಂಜನಾನಂದಪುರಿ ಶ್ರೀಗಳ ಮಾತು ತಿರಸ್ಕರಿಸಿ ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿರುವ ವಿನಯ್ ಕುಮಾರ್ ಗೆ ಓಟ್ ಹಾಕಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು
ನಗರದಲ್ಲಿ ಕುರುಬ ಸಮುದಾಯದ ಮತ್ತು ಹಿಂದುಳಿದ ಸಮಾಜಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ನಿಮಗೆ ನಾನು ಬೇಕೋ-ವಿನಯ್ ಬೇಕೋ ನೀವೇ ತೀರ್ಮಾನ ಮಾಡಿ. ನಾನು ಬೇಕು ಅಂದ್ರೆ ವಿನಯ್ ಗೆ ಒಂದೂ ಓಟು ಹಾಕಬೇಡಿ. ಬಿಜೆಪಿ ಕುರುಬ ಸಮುದಾಯಕ್ಕೆ ಒಂದು ಟಿಕೆಟ್ ಕೊಟ್ಟಿಲ್ಲ. ವಿನಯ್ ಸ್ಪರ್ಧೆಯಿಂದ ಬಿಜೆಪಿಗೆ ಆಗುವಂತೆ ಮಾಡಿದ್ದು ಸರಿಯಲ್ಲ. ದಾವಣಗೆರೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಅಭ್ಯರ್ಥಿ ಅಲ್ಲ. ಇಲ್ಲಿ ನಾನೇ ಅಭ್ಯರ್ಥಿ. ಕಾಂಗ್ರೆಸ್ ಗೆ ಹಾಕುವ ಒಂದೊಂದು ಮತಗಳೂ ನನಗೇ ಹಾಕಿದಂತೆ. ವಿನಯ್ ಗೆ ಹಾಕುವ ಒಂದೊಂದು ಮತವೂ ನನ್ನ ವಿರುದ್ಧ ಹಾಕಿದಂತೆ ಎಂದು ಸೂಚಿಸಿದರು.
ಕನಕಗುರುಪೀಠದ ಶ್ರೀಗಳೊಂದಿಗೆ ವಿನಯ್ ಬಂದಿದ್ದ. ನಾನು ಮತ್ತು ಶ್ರೀಗಳು ವಿನಯ್ ಗೆ ಯಾರದ್ದೋ ಮಾತು ಕೇಳಿ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಬೇಡ. ನಿನಗೆ ಮುಂದೆ
ಅನುಕೂಲ ಮಾಡ್ತೀನಿ ಎಂದಿದ್ದೇವು. ನಮ್ಮ ಎದುರಿಗೆ ನಿಲ್ಲುವುದಿಲ್ಲ ಒಪ್ಪಿಕೊಂಡು, ಆಮೇಲೆ ಉಲ್ಟಾ ಹೊಡೆದಿದ್ದಾರೆ. ವಿನಯ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಬಂದು ಆರು ತಿಂಗಳಾಗಿತ್ತು. ದಾವಣಗೆರೆ ಜಿಲ್ಲೆಯ ಎಲ್ಲಾ ಶಾಸಕರು, ಸಚಿವರು, ಮಾಜಿ ಸಚಿವರು, ಶಾಸಕರು,ಜಿಲ್ಲಾ ಮುಖಂಡರು ಒಟ್ಟಾಗಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ಕೊಡಲು ಹೇಳಿದ್ದರು ಎಂದರು.
ನನಗೆ ಮೋಸ ಮಾಡಿ ಬಿಜೆಪಿಗೆ ಹೋದ ಭೈರತಿ ಬಸವರಾಜು ಬಿಜೆಪಿಗೆ ಲಾಭ ಆಗಲಿ ಎಂದು ವಿನಯ್ ಗೆ ಕುಮ್ಮಕ್ಕು ನೀಡಿ ನಿಲ್ಲಿಸಿದ್ದಾನೆ. ಬಿಜೆಪಿ ಹಿಂದುಳಿದವರನ್ನು ಬಳಸಿಕೊಂಡು ಬಿಡುತ್ತೆ ಇದಕ್ಕೆ ಕೆ.ಎಸ್.ಈಶ್ವರಪ್ಪನೇ ಉದಾಹರಣೆ. ಈಶ್ವರಪ್ಪಗೆ ತನ್ನ ಮಗನಿಗೇ ಬಿಜೆಪಿ ಟಿಕೆಟ್ ಕೊಡಲಿಲ್ಲ ಎಂದರು. ಈ ಸಂದರ್ಭದಲ್ಲಿ ಎಚ್.ಎಂ.ರೇವಣ್ಣ, ಲೋಕಸಭಾ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಕುರುಬ ಸಮಾಜದ, ಹಿಂದುಳಿದ ವರ್ಗಗಳ ಸಮುದಾಯಗಳ ಮುಖಂಡರು ಇದ್ದರು.



