ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಹಾಗೂ ಉದ್ದಿಮೆದಾರರು ಏಕ ಬಳಕೆ ಪ್ಲಾಸ್ಟಿಕ್ ಬಳಕೆಯನ್ನು 2022 ರ ಜುಲೈ 01 ರಿಂದ ನಿಷೇಧಿಸಲಾಗಿದೆ ಎಂದು ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ತಿಳಿಸಿದ್ದಾರೆ.
ರಾಜ್ಯಾದ್ಯಂತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಬ್ಯಾನರ್, ಪ್ಲಾಸ್ಟಿಕ್ ಬಂಟಿಂಗ್ಸ್, ಪ್ಲಾಸ್ಟಿಕ್ ಪ್ಲೆಕ್ಸ್, ಪ್ಲಾಸ್ಟಿಕ್ ಪ್ಲೇಟ್, ಪ್ಲಾಸ್ಟಿಕ್ ಧ್ವಜ, ಪ್ಲಾಸ್ಟಿಕ್ ಕಪ್, ಪ್ಲಾಸ್ಟಿಕ್ ಸ್ಪೂನ್, ಕ್ಲಿಂಗ್ ಫಿಲ್ಮ್, ಊಟದ ಟೇಬಲ್ ಮೇಲೆ ಹಾಸಲು ಬಳಸುವ ಪ್ಲಾಸ್ಟಿಕ್ ಹಾಳೆಗಳು, ಸ್ಟ್ರಾ, ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳಂತಹ ಏಕ ಬಳಕೆ ಪ್ಲಾಸ್ಟಿಕ್ನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳ ಪ್ರಕಾರ ಪಾಲಿಸ್ಟೆರೀನ್ ಮತ್ತು ವಿಸ್ತರಿತ ಪಾಲಿಸ್ಟೆರೀನ್ ಸೇರಿದಂತೆ ಏಕಬಳಕೆ ಪ್ಲಾಸ್ಟಿಕ್ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು 2022 ರ ಜುಲೈ 01 ರಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.
ಎಲ್ಲಾ ವಸ್ತುಗಳ ಉತ್ಪಾದಕರು, ದಾಸ್ತಾನುದಾರರು, ಚಿಲ್ಲರೆ ವ್ಯಾಪಾರಿಗಳು, ಅಂಗಡಿ ಮಾಲೀಕರು, ಇ-ಕಾಮರ್ಸ್ ಕಂಪನಿಗಳು, ಬೀದಿ ವ್ಯಾಪಾರಿಗಳು, ವಾಣಿಜ್ಯ ಸಂಸ್ಥೆಗಳು (ಮಾಲ್ಗಳು/ಮಾರುಕಟ್ಟೆ ಸ್ಥಳ/ಷಾಪಿಂಗ್ ಕೇಂದ್ರ/ಸಿನಿಮಾ ಹಾಲ್/ಪ್ರವಾಸೋದ್ಯಮ ಸ್ಥಳ/ಶಾಲಾ ಕಾಲೇಜುಗಳು/ಕಚೇರಿ ಸಂಕೀರ್ಣಗಳು/ಆಸ್ಪತ್ರೆಗಳು), ಇತರ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಲ್ಲಿಸುವಂತೆ ಹಾಗೂ ಪರ್ಯಾಯವಾಗಿ ಬಟ್ಟೆ/ ಜೂಟ್/ ಕಾಗದ ಚೀಲಗಳು; ಪೇಪರ್/ ಬಟ್ಟೆ ಬಾವುಟಗಳು, ಬಟ್ಟೆ/ ಪೇಪರ್ ಬ್ಯಾನರ್ ಪೇಪರ್/ ಬಟ್ಟೆ ತೋರಣಗಳು: ಸ್ಟೀಲ್/ ಸಿರಾಮಿಕ್ ಗಾಜಿನ ಲೋಟಗಳು, ಮಣ್ಣಿನ ಲೋಟ, ಸೀಲ್/ ಸಿರಾಮಿಕ್ / ಗಾಜಿನ ತಟ್ಟೆಗಳು, ಅಡಿಕೆ ತಟ್ಟೆ, ಬಾಳೆ ಎಲೆ, ಬಳಸಿ ನಂತರ ತಿನ್ನಬಹುದಾದಂತಹ ಚಮಚಗಳು, ಸ್ಟೀಲ್ ಚಮಚಗಳಂತಹ ಪರಿಸರ ಸ್ನೇಹಿ ವಸ್ತುಗಳನ್ನು ಉಪಯೋಗಿಸಬಹುದಾಗಿದೆ.
ಮಹಾನಗರ ಪಾಲಿಕೆಯ ಅಧಿಕಾರಿಗಳ ಪರಿಶೀಲನೆ ಸಮಯದಲ್ಲಿ ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ ಪರಿಸರ ಪರಿಹಾರವನ್ನು ಕನಿಷ್ಠ ರೂ.500 ರಿಂದ ಪ್ರತಿ ಟನ್ಗೆ ರೂ.5000 ವರೆಗೂ ದಂಡ ವಿಧಿಸಿ ವಸೂಲಿ ಮಾಡಲಾಗುವುದು ಎಂದು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



