ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಿಂದ ಖಾಲಿ ಇರುವ 119 ಪೌರಕಾರ್ಮಿಕರ ಹುದ್ದೆಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಹಂತದಲ್ಲಿದೆ.
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಹಾಲಿ ನೇರಪಾವತಿ, ಕ್ಷೇಮಾಭಿವೃದ್ದಿ, ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಂದ ಮಧ್ಯವರ್ತಿ, ಅನ್ಯ ವ್ಯಕ್ತಿಗಳು ಕೆಲಸ ಕೊಡಿಸುವುದಾಗಿ ತಿಳಿಸಿ, ಹಣ ವಸೂಲಿ ಮಾಡುತ್ತಿರುವುದು ಪಾಲಿಕೆಯ ಗಮನಕ್ಕೆ ಬಂದಿರುತ್ತದೆ. ಈ ನೇಮಕಾತಿ ಪ್ರಕ್ರಿಯೆಯು ಸರ್ಕಾರದ ಅಧಿಸೂಚನೆಯಂತೆ ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿದ್ದು, ಅರ್ಜಿದಾರರು ಯಾವುದೇ ವ್ಯಕ್ತಿಗಳಿಗೆ ಹಣ ನೀಡಬಾರದು, ಒಂದು ವೇಳೆ ಅರ್ಜಿದಾರರು ಮಧ್ಯವರ್ತಿ, ಅನ್ಯ ವ್ಯಕ್ತಿಗಳಿಗೆ ಹಣ ನೀಡಿ ಮೋಸ ಹೋದಲ್ಲಿ ಅದಕ್ಕೆ ಪಾಲಿಕೆಯು ಜವಾಬ್ದಾರಿ ಆಗುವುದಿಲ್ಲ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.
ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಖಾಲಿ ಇರುವ ಒಟ್ಟು 1,433 ಪೌರ ಕಾರ್ಮಿಕ ಹುದ್ದೆ ಭರ್ತಿಗೆ ಸರ್ಕಾರ ಕರ್ನಾಟಕ ಆದೇಶ ಮಾಡಿದೆ. ಈ ಮೂಲಕ ದಾವಣಗೆರೆ ಮಹಾನಗರ ಪಾಲಿಕೆಯ ಸಂಖ್ಯಾತಿರಿಕ್ತ 119 ಹುದ್ದೆಗೆ ನೇಮಕಾತಿ ನಡೆಯಲಿದೆ. ವೇತನ; ರೂ.17000-28950 ನಿಗದಿಪಡಿಸಲಾಗಿದೆ.



