ದಾವಣಗೆರೆ: ಟೆಂಡರ್ ನೀಡಲು ಲಂಚ ಸ್ವೀಕರಿಸುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರನ ಪ್ರಕರಣ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಚನ್ನಗಿರಿ ತಾಲೂಕಿನ ಮಾಡಾಳು ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ನಡೆಸಿ 16.47 ಲಕ್ಷ ರೂ. ನಗದು, ಒಡವೆ ಮತ್ತು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಟವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೋಲಾಪುರೆ ನೇತೃತ್ವದಲ್ಲಿ ಒಬ್ಬರು ಡಿವೈಎಸ್ಪಿ, 5 ಜನ ಇನ್ಸ್ಪೆಕ್ಟರ್ಗಳು ಸೇರಿ 15ಕ್ಕೂ ಹೆಚ್ಚು ಸಿಬ್ಬಂದಿ ಮಾಡಾಳು ಗ್ರಾಮದಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮನೆಗೆ ತೆರಳಿ ಪರಿಶೀಲನೆ ನಡೆಸಿದರು.ಗ್ರಾಮದ ತೋಟದ ಮನೆ, ಮಾವಿನಹೊಳೆ ಬಳಿಯ ಕ್ರಷರ್ ಕಚೇರಿಯಲ್ಲೂ ತಪಾಸಣೆ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡರು.
ಪರಿಶೀಲನೆ ವೇಳೆ ಮನೆಯಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮತ್ತು ಅವರ ಪುತ್ರರು ಇರಲಿಲ್ಲ. ಕುಟುಂಬ ಸದಸ್ಯರು ಮಾತ್ರ ಇದ್ದರು. ಗ್ರಾಮದ ಜನರು ಮತ್ತು ಪಕ್ಷದ ಕಾರ್ಯಕರ್ತರು ಮನೆಯ ಮುಂದೆ ಜಮಾಯಿಸಿದರು ಶಾಸಕರ ಪರ ಘೋಷಣೆ ಕೂಗಿದರು.