ದಾವಣಗೆರೆ: 5 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಅಗ್ನಿಶಾಮಕ ದಳದ ಅಧಿಕಾರಿ ಬಿದ್ದಿದ್ದಾರೆ.
ಹರಿಹರ ತಾಲ್ಲೂಕಿನ ಮಲೇಬೆನ್ನೂರಿನ ಜ್ಯೋತಿ ಚಿತ್ರಮಂದಿರದ ಫೈರ್ ಸೇಫ್ಟಿ ಸಂಬಂಧ ಎನ್.ಓ.ಸಿ. ನೀಡಲು ಚಿತ್ರಮಂದಿರದ ಮಾಲೀಕರಿಂದ ಲಂಚದ ಹಣ ಪಡೆಯುತ್ತಿದ್ದ ಹರಿಹರದ ಅಗ್ನಿ ಶಾಮಕ ಠಾಣೆಯ ಮೆಸ್ ಇನ್ಚಾರ್ಜ್ ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹರಿಹರ ತಾಲ್ಲೂಕು ಫೈರ್ ಸ್ಟೇಷನ್ ಆಫೀಸರ್ ಸುಹಾಸ್ ತಮ್ಮ ಅಧೀನ ಸಿಬ್ಬಂದಿ ಮೆಸ್ ಇನ್ಚಾರ್ಜ್ ಚಂದ್ರು ಮೂಲಕ ಲಂಚದ ಹಣ ಪಡೆಯುವಾಗ ಟ್ರ್ಯಾಪ್ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಹರಿಹರದ ತಾಲ್ಲೂಕಿನ ಮಲೆಬೆನ್ನೂರು ಗ್ರಾಮದ ಜ್ಯೋತಿ ಚಿತ್ರಮಂದಿರದ ಮಾಲೀಕರಾದ ಟಿ.ಡಿ.ಅರುಣ್ , ತಮ್ಮ ಚಿತ್ರಮಂದಿರದ ಫೈರ್ ಸೇಫ್ಟಿಗೆ ಸಂಬಂಧಿಸಿದಂತೆ ಎನ್ ಓಸಿ ನೀಡಲು ಹರಿಹರದ ಅಗ್ನಿ ಶಾಮಕ ಠಾಣೆಗೆ ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ಹರಿಹರದ ತಾಲ್ಲೂಕು ಫೈರ್ ಸ್ಟೇಷನ್ ಆಫೀಸರ್ ಸುಹಾಸ್ ಅವರು ಅರುಣ್ ಅವರಿಗೆ 8ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ಎನ್ ಓಸಿ ಕೊಡಲು 5ಸಾವಿರ ರೂ.ಗಳಿಗೆ ಒಪ್ಪಿಕೊಂಡಿದ್ದರು. ಅದರಂತೆ ಸೋಮವಾರ ಅರುಣ್ ಅವರಿಂದ 5ಸಾವಿರ ಲಂಚದ ಹಣ ಪಡೆಯುವಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಲಂಚದ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಘಟಕದ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪುರ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಕೆ.ಜಿ.ರಾಮಕೃಷ್ಣ ನೇತೃತ್ವದಲ್ಲಿ ದಾಳಿ ನಡೆದಿದೆ.



