ದಾವಣಗೆರೆ: ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಯಂತ್ರೋಪಕರಣ ಕೊಡಿಸುವುದಾಗಿ ರೈತರೊಬ್ಬರಿಂದ ಲಂಚ ಪಡೆಯುವಾಗ ಆಗ್ರೋ ಮಾರ್ಟ್ ಕಂಪನಿಯ ಸೇಲ್ಸ್ ಎಕ್ಸಿಕ್ಯೂಟಿವ್ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ಸಾಲಬಾಳು ಗ್ರಾಮದ ಕೃಷ್ಣನಾಯ್ಕ ಬಂಧಿತ ಆರೋಪಿ. ನ್ಯಾಮತಿ ತಾಲ್ಲೂಕಿನ ಯರಗನಾಳ್ ಗ್ರಾಮದ ರೈತ ಹತ್ತೂರು ಯುವರಾಜ ಎಂಬುವವರು ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಯಂತ್ರೋಪಕರಣ ಪಡೆಯಲು ಅರ್ಜಿ ಸಲ್ಲಿಸಿದ್ದರು. ಕೃಷಿ ಅಧಿಕಾರಿಗಳಿಗೆ ಹಣ ನೀಡಿ ಯಂತ್ರೋಪಕರಣ ಕೊಡಿಸುವುದಾಗಿ ಆರೋಪಿ ₹ 2,500 ಮೊತ್ತಕ್ಕೆ ಬೇಡಿಕೆ ಇಟ್ಟಿದ್ದು, ₹ 2,000 ಲಂಚ ಪಡೆಯುವಾಗ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.ಈ ಪ್ರಕರಣದಲ್ಲಿ ಅಧಿಕಾರಿಗಳ ಪಾತ್ರ ಬಗ್ಗೆ ತನಿಖೆ ನಡೆಯುತ್ತಿದೆ.
ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪುರೆ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಇನ್ಸ್ಪೆಕ್ಟರ್ಗಳಾದ ಸರಳಾ, ಗುರುಬಸವರಾಜ, ಸಿಬ್ಬಂದಿ ಆಂಜನೇಯ, ಆಶಾ, ಧನರಾಜ್, ಮಂಜುನಾಥ, ಗಿರೀಶ, ಸಂತೋಷ, ಕೋಟಿನಾಯ್ಕ, ಲಿಂಗೇಶ ಭಾಗಿಯಾಗಿದ್ದರು.



