ದಾವಣಗೆರೆ: 5 ಸಾವಿರ ಲಂಚ ಪಡೆಯುವಾಗ ಚನ್ನಗಿರಿ ತಾಲೂಕು ಕಚೇರಿಯ ಶಿರಸ್ತೇದಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಜಮೀನಿನ ಪಹಣಿ, ಆಕಾರ್ ಬಂದ್ ತಾಳೆ ಸರಿಪಡಿಸಿಕೊಡಲು 5 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಚನ್ನಗಿರಿ ತಾಲೂಕು ಚೇರಿಯ ಶಿರಸ್ತೇದಾರ್ರನ್ನು ಇಂದು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಶಿರಸ್ತೇದಾರ್ ಸುಧೀರ್ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ.
ಹರಿಹರ ತಾಲೂಕಿನ ಹಾಲಿವಾಣ ಗ್ರಾಮದ ಲೋಹಿತ್ ಕುಮಾರ್ ಎಂಬುವರು ಅವರ ಅಕ್ಕನ ಮಗಳಾದ ಮೇಘನಾ ಎಂಬುವರಿಗೆ ಸೇರಿದ ಮರಡಿ ಗ್ರಾಮದಲ್ಲಿನ ಸರ್ವೇ ನಂಬರ್ 42/1ರಲ್ಲಿ 7 ಗುಂಟೆ ಜಮೀನಿನ ದಾಖಲಾತಿಗಾಗಿ ಜಮೀನಿನ ಪಹಣಿ, ಆಕಾರ್ ಬಂದ್ ತಾಳೆ ಸರಿಪಡಿಸಿಕೊಡಲು ಅರ್ಜಿ ಸಲ್ಲಿಸಿದ್ದರು. ಚನ್ನಗಿರಿ ತಾಲೂಕು ಕಚೇರಿಯಲ್ಲಿ ಲಂಚ 5 ಸಾವಿರ ಹಣ ಪಡೆಯುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿ ಸುಧೀರ್ ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಳ್ಳಲಾಗಿದೆ.



