ದಾವಣಗೆರೆ: ಬರನಿರೋಧಕ, ಮಳೆಯಾಶ್ರಿತ ನವೀನ ನವಣೆ ತಳಿ HN 46, ಸ್ಥಳೀಯ ತಳಿಗಳಿಗಿಂತ ಅಧಿಕ ಇಳುವರಿ ಕೊಡುತ್ತದೆ ಎಂದುತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ ಬಿ ಓ ತಿಳಿಸಿದ್ದಾರೆ.
ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಜಗಳೂರು ತಾಲೂಕಿನ ಕಲ್ಲೇ ದೇವರಪುರ ಗ್ರಾಮದಲ್ಲಿ ಅಧಿಕ ಇಳುವರಿಯ ನವಣೆ HN 46 ಹೊಸ ತಳಿಯ ಕ್ಷತ್ರೋತ್ಸವದಲ್ಲಿ ಮಾತನಾಡಿದರು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಬಿಡುಗಡೆ ಮಾಡಿದ ಹೊಸ ನವಣೆ(HN 46) ತಳಿಯಾ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಮಾಡಲಾಗಿತ್ತು. ತಳಿಯು ಬಿತ್ತನೆ ಯಾದಾಗಿಂದ ಇಲ್ಲಿ ತನಕ ಉತ್ತಮ ಮಳೆ ಬಂದಿದ್ದು , ಉತ್ತಮ ಇಳುವರಿ ಬರುವ ಲಕ್ಷಣಗಳಿವೆ ಎಂದು ಅಭಿಪ್ರಾಯಪಟ್ಟರು.
ರೈತರು ಕೊಯ್ಲಾದ ನಂತರ ಬೀಜವನ್ನು ಶೇಖರಣೆ ಮಾಡಿ ಇತರ ರೈತರೊಂದಿಗೆ ಹಂಚಿಕೊಳ್ಳಬೇಕು. ಪ್ರಗತಿಪರ ಹಾಗೂ ಪ್ರಾತ್ಯಕ್ಷಿಕೆ ರೈತ ಗುರುಮೂರ್ತಿ ಮಾತನಾಡಿ, ನವಣೆಯ ತೆನೆಗಳು ಒಂದು ಅಡಿಗಿಂತ ಉದ್ದವಿದ್ದು , ಎತ್ತರ ಕೂಡ ಬೆಳೆದಿದ್ದು ನಮ್ಮ ಸ್ಥಳೀಯ ತಳಿಗಳಿಗಿಂತ ಈ ಹೊಸ ತಳಿಯು ಹತ್ತರಿಂದ ಹನ್ನೆರಡು ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆ ಇದೆ ಎಂದರು.
ತೋಟಗಾರಿಕೆ ತಜ್ಞ ಬಸವನಗೌಡ ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯಗಳನ್ನು ಸೇವಿಸುವುದರಿಂದ ಕೃಷಿಕರು ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದರು. ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ನಿರ್ದೇಶಕರಾದ ಶ್ರೀ ಕೃಷ್ಣಮೂರ್ತಿ ಮಾತನಾಡಿ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸರಿಯಾದ ಸಮಯಕ್ಕೆ ಸಲಹೆಗಳನ್ನು ನೀಡಿದ್ದರಿಂದ ನವಣೆ ತಳಿಯು ಉತ್ತಮವಾಗಿದ್ದು, ಅಧಿಕ ಇಳುವರಿ ಬರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರು ಭಾಗವಹಿಸಿದ್ದರು.