ದಾವಣಗೆರೆ: ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ನೂತನ ಹೈಟೆಕ್ ಬಸ್ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿ ನಿಲ್ದಾಣದಿಂದ ವಾಹನಗಳ ಕಾರ್ಯಾಚರಣೆ ಹಾಗೂ ನೂತನ ಮಾರ್ಗಗಳಿಗೆ ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಚಾಲನೆ ನೀಡಿದರು.
ಸ್ಮಾರ್ಟ್ ಸಿಟಿ ಅನುದಾನದ ಶೇ 75 ರಷ್ಟು ಹಾಗೂ ಕೆ ಎಸ್ ಆರ್ ಟಿ ಸಿ ನಿಗಮದ ಅನುದಾನ ಶೇ 25 ರಷ್ಟು ಸೇರಿದಂತೆ ಒಟ್ಟು 120 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಬಸ್ ನಿಲ್ದಾಣವನ್ನಾಗಿ ನಿರ್ಮಾಣ ಮಾಡಲಾಗಿದ್ದು ಇದು ದಾವಣಗೆರೆ ನಗರದಲ್ಲಾಗಿರುವುದು ಜಿಲ್ಲೆಯ ಜನತೆಗೆ ಬಹಳ ಸಂತೋಷ ತಂದಿದೆ ಎಂದು ತಿಳಿಸಿದರು.
ಅತ್ಯಾಧುನಿಕ ಬಸ್ ನಿಲ್ದಾಣವನ್ನಾಗಿ ಮಾಡಿ ಸಾರ್ವಜನಿಕರಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಸಾರ್ವಜನಿಕರು ಹಾಗೂ ಕೆ.ಎಸ್. ಆರ್. ಟಿ.ಸಿ. ಸಿಬ್ಬಂದಿಗಳು ಇಲ್ಲಿನ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ನೂತನ ಸಾರಿಗೆ ಮಾರ್ಗಗಳಿಗೆ ಚಾಲನೆ. ಬಡವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎರಡು ರಾಜಹಂಸ, ಎರಡು ವೇಗದೂತ ಬಸ್ಸುಗಳನ್ನು ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಬಳಕೆ ಆಗುವಂತೆ ಮುಕ್ತಗೊಳಿಸಿದರು. ದಾವಣಗೆರೆಯಿಂದ ಹೊನ್ನಳ್ಳಿ ಶಿವಮೊಗ್ಗ ರಸ್ತೆಗೆ ಎರಡು ರಾಜಹಂಸ ಬಸ್ ಹಾಗೂ ಭರಮಸಾಗರ ಸಿರಿಗೆರೆ ಮಠ , ಚನ್ನಗಿರಿ ಧರ್ಮಸ್ಥಳ-ಸುಬ್ರಹ್ಮಣ್ಯ ಸ್ಥಳಗಳಿಗೆ ವೇಗದೂತಗಳನ್ನು ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಹೋಗಲು ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಮೇಯರ್ ವಿನಾಯಕ್ ಬಿ.ಹೆಚ್, ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಕ ಸಿದ್ದೇಶ್ ಎನ್.ಹೆಬ್ಬಾಳ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.