ದಾವಣಗೆರೆ: ರಾಜ್ಯದ ಕನ್ನಡ ಶಾಲೆ ಉಳಿಸಲು ಗೋಕಾಕ್ ಚಳವಳಿ ಮಾದರಿಯಲ್ಲಿ ಚಳವಳಿ ನಡೆಯಬೇಕಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಹೇಳಿದ್ದಾರೆ.
ತಾಲೂಕಿನ ಎಲೆಬೇತೂರು ಗ್ರಾಮದಲ್ಲಿ ನಡೆದ ದಾವಣಗೆರೆ ಜಿಲ್ಲಾ 11 ನೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಶಾಲೆ ಉಳಿಸುವ ವಿಚಾರವಾಗಿ ಇಷ್ಟರಲ್ಲಿಯೇ ಸಭೆ ನಡೆಸಲಾಗುವುದು.ಸಭೆಯ ಅಧ್ಯಕ್ಷತೆಯನ್ನು ಕಾದಂಬರಿಗಾರ ಎಸ್.ಎಲ್ ಭೈರಪ್ಪ ವಹಿಸಲಿದ್ದಾರೆ. ಕೊರೊನಾ ಕಾಲದಲ್ಲಿ ಶೇ. 20 ರಷ್ಟು ಮಕ್ಕಳು ಕನ್ನಡ ಶಾಲೆಗಳಿಂದ ದೂರ ಉಳಿದಿದ್ದಾರೆ. ಗ್ರಾಮೀಣ ಪ್ರದೇಶದ ಜನತೆ ಇಂಗ್ಲಿಷ್ ಶಿಕ್ಷಣದ ಬಗ್ಗೆ ವ್ಯಾಮೋಹ ಹೆಚ್ಚಾಗಿದೆ.ಇಂತಹ ಪರಿಸ್ಥಿತಿಯಲ್ಲಿ ಗೋಕಾಕ ಚಳವಳಿ ಮಾದರಿಯಲ್ಲಿ ಇನ್ನೊಂದು ಚಳವಳಿ ಕನ್ನಡ ಶಾಲೆಗಳಿಗೆ ಆಗಬೇಕಾಗಿದೆ ಎಂದರು.
ಸಿರಿಗೆರೆ ತರಳುಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿಶ್ವ ಕನ್ನಡ ಸಮ್ಮೇಳನ ದಾವಣಗೆರೆಯಲ್ಲಿ ನಡೆದರೆ ಒಳ್ಳೆಯದು. ದಾವಣಗೆರೆ ರಾಜ್ಯದ ಹೃದಯ ಭಾಗ. ಇಂತಹ ಸ್ಥಳದಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುವುದು ಸೂಕ್ತ. ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದರು.



