ದಾವಣಗೆರೆ: ದಾವಣಗೆರೆ ತಾಲ್ಲೂಕು ಕಸಾಪ ಅಧ್ಯಕ್ಷರಾಗಿರುವ ಬಿ.ವಾಮದೇವಪ್ಪ ಅವರು ಜಿಲ್ಲಾ ಕಸಾಪ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಕಸಾಪ ಸಕ್ರಿಯ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಿದ್ದೇನೆ. 2016ರ ಚುನಾವಣೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದೆ, ಹಾಲಿ ಜಿಲ್ಲಾಧ್ಯಕ್ಷ ಡಾ.ಮಂಜುನಾಥ್ ಕುರ್ಕಿ ಅವರ ಮನವಿಯ ಮೇರೆಗೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ. ಹೀಗಾಗಿ ಈ ಬಾರಿ ಮಂಜುನಾಥ್ ಕುರ್ಕಿ ನನ್ನ ಪರ ನಿಲ್ಲುವ ವಿಶ್ವಾಸವಿದೆ ಎಂದರು.
ಕಳೆದ 20 ವರ್ಷಗಳಿಂದ ಕಸಾಪದಲ್ಲಿ ವಿವಿಧ ಹುದ್ದೆ ಅಲಂಕರಿಸಿ ಹಲವು ಅರ್ಥಪೂರ್ಣ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇನೆ. ಈ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದರೆ ಹಲವು ಸಮಾಜಮುಖಿ ಕಾರ್ಯಕ್ರಮಗಳ ಜೊತೆಗೆ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಅಖಿಲ ಭಾರತ ಸಾಹಿತ್ಯ ಸಮ್ಮೇಳನ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜಿಲ್ಲಾ ಮತ್ತು ತಾಲ್ಲೂಕು ಸಾಹಿತ್ಯ ಸಮ್ಮೇಳನಗಳನ್ನು ಎಲ್ಲರ ಮಾರ್ಗದರ್ಶನ ಪಡೆದು ಅಚ್ಚುಕಟಾಗಿ ಆಯೋಜಿಸಲು ಆದ್ಯತೆ ನೀಡುತ್ತೇನೆ ಎಂದರು.
ಕನ್ನಡ ಭಾಷೆ ಕಟ್ಟುವ ದೃಷ್ಠಿ ಇಟ್ಟುಕೊಂಡು ಈ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು, ಮತದಾರರು ತಮ್ಮನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಶ್ಯಾಗಲೆ ಸದಾಶಿವಪ್ಪ, ಬಕ್ಕಪ್ಪ, ಎಸ್.ಟಿ.ಶಾಂತಗಂಗಾಧರ, ಪ್ರೊ.ಎಚ್.ವಿ.ವಾಮದೇವಪ್ಪ, ಮಲ್ಲಮ್ಮ ನಾಗರಾಜ್, ನಾಗರಾಜ್, ಜಗದೀಶ್, ಷಡಾಕ್ಷರಪ್ಪ, ಸಾಲಿಗ್ರಾಮ ಗಣೇಶ್ ಶೆಣೈ ಹಾಜರಿದ್ದರು.



