ದಾವಣಗೆರೆ: ಮಾಜಿ ಸಚಿವ ಬಿ. ಸಿ. ಪಾಟೀಲ್ ಅಳಿಯ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬಿ ಸಿ ಪಾಟೀಲ್ ದೊಡ್ಡ ಮಗಳ ಪತಿ ಪ್ರತಾಪ್ ಕುಮಾರ್ (41) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊನ್ನಾಳಿ ತಾಲೂಕು ಅರಕೆರೆ ಸಮೀಪದ ಅರಣ್ಯ ಬಳಿ ಕಾರು ನಿಲ್ಲಿಸಿ ಕಾರಿನಲ್ಲಿ ವಿಷ ಸೇವಿಸಿದ್ದಾರೆ.
ನಾನು ವಿಷ ಸೇವಿಸುವುದಾಗಿ ಮನೆಯವರಿಗೆ ಪೋನ್ ಮಾಡಿ ಮನೆಯವರಿಗೆ ಪ್ರತಾಪ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನ 3.30 ರ ಸುಮಾರಿಗೆ ಕಾರಿನಲ್ಲಿ ವಿಷ ಸೇವನೆ ಮಾಡಿದ್ದರು. ವಿಷಯ ತಿಳಿದ ತಕ್ಷಣ ಪೊಲೀಸರು ಹೊನ್ನಾಳಿ ಆಸ್ಪತ್ರೆಗೆ ದಾಖಲು ಮಾಡಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಅವರ ಸ್ಥಿತಿ ಗಂಭೀರವಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರತಾಪ್ ಕುಮಾರ್ ಬಿಸಿ ಪಾಟೀಲ್ ಅವರ ದೊಡ್ಡ ಮಗಳು ಸೌಮ್ಯ ಪಾಟೀಲ್ ಅವರ ಗಂಡನಾಗಿದ್ದು, ಬಿಸಿ ಪಾಟೀಲ್ ಅವರ ಹೆಂಡತಿಯ ಸ್ವಂತ ತಮ್ಮನಾಗಿದ್ದಾರೆ. ತಮ್ಮ ಹಿರಿಯ ಮಗಳನ್ನು ಹೆಂಡತಿಯ ತಮ್ಮನಿಗೆ ಬಿಸಿ ಪಾಟೀಲ್ ಮದುವೆ ಮಾಡಿ ಕೊಟ್ಟಿದ್ದರು. ಅಂದರೆ ಅಕ್ಕನ ಮಗಳನ್ನೇ ಪ್ರತಾಪ್ ಕುಮಾರ್ ಮದುವೆ ಮಾಡಿಕೊಂಡಿದ್ದರು. ಅಳಿಯ ಮೃತಪಟ್ಟ ಮಾಹಿತಿ ತಿಳಿದು ಮರಣೋತ್ತರ ಪರೀಕ್ಷೆ ಹಿನ್ನೆಲೆ ಬಿ ಸಿ ಪಾಟೀಲ್ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ್ದಾರೆ.
ಎಷ್ಟೇ ಪ್ರಯತ್ನ ಪಟ್ಟರೂ ಬಿಸಿ ಪಾಟೀಲ್ ಅಳಿಯನನ್ನ ಉಳಿಸಿಕೊಳ್ಳಲು ಸಾಧ್ಯವಾಗದೆ, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಅಳಿಯ ಪ್ರತಾಪ್ ಕುಮಾರ್ ಆತ್ಮ ಹತ್ಯೆ ಪ್ರಯತ್ನದ ವಿಚಾರ ಗೊತ್ತಾಗ್ತಿದ್ದಂತೆ , ಅವರ ಕುಟುಂಬಸ್ಥರು ಬಿ. ಸಿ ಪಾಟೀಲ್ ರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.ಕೂಡಲೇ ಪೊಲೀಸ್ರಿಗೆ ಕರೆ ಮಾಡಿ ಅಳಿಯನ ಮೊಬೈಲ್ ನಂಬರ್ (ಹಾಗೂ ಕಾರು ನಂಬರ್ ತಿಳಿಸಿ ಅಳಿಯನನ್ನ ತಕ್ಷಣ ಪತ್ತೆಹಚ್ಚುವಂತೆ ಮನವಿ ಮಾಡಿದ್ದಾರೆ. ಕೂಡಲೇ ಕಾರ್ ನಂಬರ್ ಹಾಗೂ ಮೊಬೈಲ್ ನಂಬರ್ ನ ಶಿವಮೊಗ್ಗ ಪೊಲೀಸ್ರು ಟ್ರೇಸ್ ಮಾಡಿದ್ದರು.
ಮಧ್ಯಾಹ್ನ 3 ಘಂಟೆ ಸುಮಾರಿಗೆ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ಕಾರು ಪತ್ತೆಯಾಗಿದ್ದು, ಕಾರಿನಲ್ಲಿ ವಿಷ ಸೇವಿಸಿ ನರಳಾಡುತ್ತಿದ್ದ ಸ್ಥಿತಿಯಲ್ಲಿ ಪ್ರತಾಪ್ ಕುಮಾರ್ ಪತ್ತೆಯಾಗಿದ್ದರು.