ದಾವಣಗೆರೆ: ಪ್ರತಿಯೊಂದು ಸಮಾಜವು ತಮ್ಮ ತಮ್ಮ ಸಮಾಜದ ಹಾಸ್ಟೆಲ್, ಸಮುದಾಯ ಭವನಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆದು ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಬೇಕು ಎಂದು ಮೇಯರ್ ಎಸ್.ಟಿ. ವೀರೇಶ್ ಕರೆ ನೀಡಿದರು.
ಜೈನ ಸಮುದಾಯದಿಂದ ಆವರಗೆರೆಯ ಬಳಿ 65 ಬೆಡ್ ವ್ಯವಸ್ಥೆಯ ಕೋವಿಡ್ ಕೇರ್ ಸೆಂಟರ್ ಸಿದ್ಧತೆ ಪರೀಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ರೋಗಿಗಳು ಸೂಕ್ತ ಬೆಡ್ ಸಿಗದೇ ಪರದಾಡುತ್ತಿದ್ದಾರೆ. ಹೀಗಾಗಿ ಆಯಾ ಸಮುದಾಯ ಮುಖಂಡರು ಸಮುದಾಯ ಭವನ, ಹಾಸ್ಟೆಲ್ ಗಳಲ್ಲಿ ಸೂಕ್ತ ಬೆಡ್ ವ್ಯವಸ್ಥೆ ಕಲ್ಪಿಸಲು ಮುಂದೆ ಬರಬೇಕು. ಇದಕ್ಕೆ ಬೇಕಾದ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಮಹಾನಗರ ಪಾಲಿಕೆ ಸಿದ್ಧವಿದೆ ಎಂದು ತಿಳಿಸಿದರು.

ಎಲ್ಲವನ್ನು ಸರ್ಕಾರವೇ ಮಾಡಲು ಸಾಧ್ಯವಿಲ್ಲ. ಕೊರೊನಾ ಸಂದಿಗ್ಧ ಸ್ಥಿತಿಯಲ್ಲಿ ಸಮಾಜ ಸರ್ಕಾರದ ಜೊತೆ ಕೈ ಜೋಡಿಸಬೇಕು. ಜನಗರ ಜೈನ ಸಮುದಾಯ ಸ್ವಯಂ ಪ್ರೇರಣೆಯಿಂದ 65 ಬೆಡ್ ಮತ್ತು ಆರೋಗ್ಯ ಕಿಟ್ , ಊಟ ವ್ಯಸ್ಥೆಯನ್ನು ಒದಗಿಸಲು ಮುಂದೆ ಬಂದಿದೆ. ಜೈನ ಸಮುದಾಯದ ಕಾರ್ಯಕ್ಕೆ ಮಹಾನಗರ ಪಾಲಿಕೆ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ. ಇದೇ ರೀತಿ ಬೇರೆ ಸಮುದಾಯಗಳು ಕೋವಿಡ್ ಕೇರ್ ಸೇಂಟರ್ ತೆರೆಯಬೇಕೆಂದು ಮನವಿ ಮಾಡಿದರು.
ದಾವಣಗೆರೆ ಜೈನ ಸಮುದಾಯ ದಿನ 24 ತಾಸು ಕಾರ್ಯ ನಿರ್ವಹಿಸುವಂತಹ 65 ಬೆಡ್ ವ್ಯವಸ್ಥೆ ಹೊಂದಿದ ಕೋವಿಡ್ ಕೇರ್ ಸೆಂಟರ್ ನಾಳೆ (ಮೇ .5) ಉದ್ಘಾಟನೆಗೊಳ್ಳಲಿದೆ. ಇಲ್ಲಿ ಕೋವಿಡ್ ರೋಗಿಗಳಿಗೆ ಅಗತ್ಯವಾದ ಬೆಡ್,ವೈದ್ಯರು, ನರ್ಸ್ ಸೇರಿದಂತೆ ಊಟ ವ್ಯಸ್ಥೆಯನ್ನು ಕಲ್ಪಿಸಲಾಗಿದೆ.



