ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ರಂಗಯ್ಯನದುರ್ಗ ಕೊಂಡುಕುರಿ ಅರಣ್ಯದಲ್ಲಿ ಕಾಡುಪ್ರಾಣಿ ಬೇಟೆಯಾಡಲು ಇಟ್ಟಿದ್ದ ಕಚ್ಚಾಬಾಂಬ್ ಸ್ಫೋಟಗೊಂಡು ಹಸುವೊಂದು ಸಾವನ್ನಪ್ಪಿದ ಘಟನೆ ನಡೆದಿದೆ.
- ಹಂದಿ ಸೇರಿದಂತೆ ಇತರೆ ಕಾಡುಪ್ರಾಣಿ ಬೇಟೆಯಾಡಲು ಇಟ್ಟಿದ್ದ ಕಚ್ಚಾಬಾಂಬ್ ಸ್ಫೋಟ
- ತೀವ್ರವಾಗಿ ಗಾಯಗೊಂಡಿದ್ದ ಹಸು ಸಾವು
- ಅರಣ್ಯಾಧಿಕಾರಿಗಳಿಂದ ಸ್ಫೋಟಗೊಂಡ ಕೊಂಡುಕುರಿ ಅರಣ್ಯ ಪ್ರದೇಶಕ್ಕೆ ಭೇಟಿ
- ಅರಣ್ಯ ಪ್ರದೇಶದಲ್ಲಿ ಕಚ್ಚಾಬಾಂಬ್ ಗೆ ಕಡಿವಾಣಕ್ಕೆ ಸ್ಥಳೀಯರ ಆಗ್ರಹ
ತಾಲಗಲೂಕಿನ ಗೋಡೆ ಗ್ರಾಮದ ರೈತ ರಂಗನಾಥ ಎಂಬವರು ಹಸು ಸಾವನ್ನಪ್ಪಿದೆ. ಈತ ಕೊಂಡುಕುರಿಯ ಕಾಡಂಚಿನಲ್ಲಿ ಹಸು ಮೇಯಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಾಡು ಪ್ರಾಣಿ ಬೇಟೆಯಾಡಲು ಇಟ್ಟಿದ್ದ ಮಾಂಸದ ಮುದ್ದೆಗೆ ಹಸು ಬಾಯಿ ಹಾಕಿದಾಗ ಕಚ್ಚಾಬಾಂಬ್ ಸ್ಫೋಟಹೊಂಡಿದೆ. ಇದರಿಂದ ಹಸುವಿನ ಬಾಯಿಗೆ ತೀವ್ರ ಗಾಯವಾಗಿದ್ದು, ಮನೆಗೆ ಬರುವ ವೇಳೆಗೆ ಹಸು ಸಾವನ್ನಪ್ಪಿದೆ.
ಅರಣ್ಯಾಧಿಕಾರಿ ಸ್ಥಳ ಪರಿಶೀಲನೆ: ಕೊಂಡುಕುರಿ ವಲಯ ಅರಣ್ಯಾಧಿಕಾರಿ ಜ್ಯೋತಿ ಮೆಣಸಿನಕಾಯಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಹುಬ್ಬಳ್ಳಿಯಿಂದ ಬಾಂಬ್ ಪತ್ತೆದಳದ ತಜ್ಞರು ಬಂದು ಪರಿಶೀಲಿಸಿದ್ದಾರೆ. ಕೂಂಬಿಂಗ್ ಕಾರ್ಯಾಚರಣೆ ಮಾಡಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಪ್ಪಿತಸ್ಥರ ಪತ್ತೆಗೆ ಬಲೆ ಬೀಸಿದ್ದೇವೆ. ಪ್ರಕರಣದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕಟ್ಟಿಗೆ ತರಲು, ಕುರಿ, ದನ ಮೇಯಿಸಲು ಪ್ರತಿದಿನ ಜನ ಕಾಡಿಗೆ ಹೋಗುತ್ತಾರೆ. ಇಂತಹ ಕಚ್ಚಾಬಾಂಬ್ ಗೆ ಬಲಿಯಾದರೆ ಅವರ ಜೀವಗಳಿಗೆ ಹೊಣೆ ಯಾರು? ಎಂದು ಮೃತ ಹಸುವಿನ ಮಾಲೀಕ ರಂಗನಾಥ್ ಪ್ರಶ್ನಿಸಿದ್ದಾರೆ.



