ದಾವಣಗೆರೆ: ಜಗಳೂರು ಮಾಜಿ ಶಾಸಕ, ಬಿಜೆಪಿ ಹಿರಿಯ ನಾಯಕ ಟಿ.ಗುರುಸಿದ್ದನಗೌಡ ಅವರು ಬಿಜೆಪಿ ಗುಡ್ ಬೈ ಹೇಳಿ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಬಿಜೆಪಿಯಿಂದ ಮಗನಿಗೆ ಟಿಕೆಟ್ ಕೊಡಿಸಲು ಕೊನೆವರೆಗೂ ಯತ್ನಿಸಿದ್ದ ಗುರುಸಿದ್ದನಗೌಡರು ಬಿಜೆಪಿಗೆ ಶಾಕ್ ನೀಡಿದ್ದು, ತಮ್ಮ ಮಕ್ಕಳೊಂದಿಗೆ ಕಾಂಗ್ರೆಸ್ ಗೆ ಜೈ ಎಂದಿದ್ದಾರೆ.
ಗುರುಸಿದ್ದನಗೌಡ ಅವರೊಂದಿಗೆ ಅವರ ಪುತ್ರ ಆರೈಕೆ ಆಸ್ಪತ್ರೆಯ ಡಾ. ಟಿ.ಜಿ.ರವಿಕುಮಾರ್, ಬಿಜೆಪಿ ಮುಖಂಡರುಗಳಾದ ಟಿ.ಜಿ.ಅರವಿಂದ್, ಟಿ.ಜಿ.ಪ್ರವೀಣ್, ಕಕ್ಕರಗೊಳ್ಳದ ಕಲ್ಲಿಂಗಪ್ಪ, ನಾಗರಾಜ ಸ್ವಾಮಿ, ಮಟ್ಟಿಕಲ್ಲು ವೀರಭದ್ರಸ್ವಾಮಿ, ಗೌರಿಪುರದ ಶಿವಣ್ಣ ಮತ್ತಿತರರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಮ್ಮುಖದಲ್ಲಿ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ಜಗಳೂರು ಶಾಸಕ ದೇವೆಂದ್ರಪ್ಪ, ಎನ್.ಜಿ.ಪುಟ್ಟಸ್ವಾಮಿ, ಶಿವನಗೌಡ, ಕಮ್ಮತ್ತಹಳ್ಳಿ ಮಂಜುನಾಥ್ , ಶ್ಯಾಗಲೆ ಜಯಣ್ಣ ಮತ್ತಿತರರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಗುರುಸಿದ್ದನಗೌಡರು ಮತ್ತು ಅವರ ಬೆಂಬಲಿಗರು ಕಾಂಗ್ರೆಸ್ ಪಕ್ಷ ಸೇರಿರುವುದರಿಂದ ನಮಗೆ ಆನೆ ಬಲ ಬಂದಂತಾಗಿದೆ.ಅವರ ಮಾರ್ಗದರ್ಶನದಲ್ಲಿ ನಾವುಗಳು ಮುನ್ನಡೆಯುತ್ತವೆ ಎಂದರು.
ನಂತರ ಆರೈಕೆ ಆಸ್ಪತ್ರೆಯ ಡಾ.ಟಿ.ಜಿ. ರವಿಕುಮಾರ್ ಮಾತನಾಡಿ ಬಿಜೆಪಿ ಪಕ್ಷದಲ್ಲಿ ಸರ್ವಾಧಿಕಾರಿ ಧೋರಣೆ ಇರುವುದನ್ನು ನಾವು ಖಂಡಿಸುತ್ತಾ ಬಂದೆವು. ವಿದ್ಯಾವಂತರಿಗೆ ಅವಕಾಶ ನೀಡುವಂತೆ ಮನವಿ ಮಾಡಿದರೂ ಸಹ ಹೈಕಮಾಂಡ್ ನಮ್ಮ ಮನವಿಗೆ ಸ್ಪಂದಿಸದೇ ಇರುವುದು ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಏಕ ಸ್ವಾಮ್ಯ ಆಡಳಿತದಿಂದ ಬೇಸತ್ತು ಪಕ್ಷವನ್ನು ತೊರೆದವು ಎಂದರು.
ದಾವಣಗೆರೆ ಜಿಲ್ಲೆಗೆ ಒಬ್ಬ ಸಮರ್ಥ ಆಡಳಿತಗಾರ ಮಲ್ಲಿಕಾರ್ಜುನ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದ್ದು, ಅವರ ಪತ್ನಿ ವಿದ್ಯಾವಂತರಿದ್ದು ಅವರು ನಮ್ಮನ್ನು ಪ್ರತಿನಿಧಿಸಿದರೆ ಕ್ಷೇತ್ರಕ್ಕೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.



