ದಾವಣಗೆರೆ: ಅಡಿಕೆ ವ್ಯಾಪಾರಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ( ಐಟಿ ) ದಾಳಿ ಮಾಡಿದ್ದು, ಎರಡು ದಿನ ಶೋಧದ ಬಳಿಕ ಅಡಿಕೆ ವ್ಯಾಪಾರಿ ಮನೆಯಲ್ಲಿ 2 ಕೋಟಿಗೂ ಅಧಿಕ ನಗದು, 1 ಕೆ.ಜಿ. ಚಿನ್ನ ಹಾಗೂ ಹಲವು ದಾಖಲೆ ವಶಕ್ಕೆ ಪಡೆಯಲಾಗಿದೆ.
ಈ ದಾಳಿ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬುಳುಸಾಗರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅಡಿಕೆ ವ್ಯಾಪಾರಿಗಳಾದ ಮಹಮದ್ ಖಲೀಮ್ ಹಾಗೂ ಅವರ ಸಹೋದರ ಬಾಬು ಅಲಿಯಾಸ್ ಜಾಕೀರ್ ಅಹಮದ್ ಖಾನ್ ಅವರ ಮನೆ ಮೇಲೆ ಶುಕ್ರವಾರ ತಡ ರಾತ್ರಿ ದಾಳಿ ನಡೆದಿದ್ದು,ಶನಿವಾರ ಸಹ ಶೋಧ ಕಾರ್ಯ ಮುಂದುವರೆದಿತ್ತು. ಬೆಂಗಳೂರು ಹಾಗೂ ದಾವಣಗೆರೆಯಿಂದ 20 ಐಟಿ ಅಧಿಕಾರಿಗಳು ಬಂದಿದ್ದರು.
ಖಲೀಮ್ ಹಾಗೂ ಜಾಕೀರ್ ಅಹಮದ್ ಖಾನ್ 25ರಿಂದ 30 ವರ್ಷಗಳಿಂದ ಅಡಿಕೆ ವ್ಯಾಪಾರವನ್ನು ಮಾಡುತ್ತಿದ್ದು, ದಾವಣಗೆರೆ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ 100 ಎಕರೆಗಿಂತ ಹೆಚ್ಚು ಅಡಿಕೆ ತೋಟವನ್ನು ಹೊಂದಿದ್ದಾರೆ. ಸಹೋದರರು ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಅಡಿಕೆಯನ್ನು ಖರೀದಿ ಮಾಡಿ, ದೆಹಲಿ, ಆಗ್ರಾ, ಸೂರತ್ ಸೇರಿದಂತೆ ಹಲವು ಪ್ರದೇಶಗಳಿಗೆ ಸಾಗಿಸುತ್ತಿದ್ದರು. ಐಟಿ ದಾಳಿಯಲ್ಲಿ 2 ಕೋಟಿಗೂ ಹೆಚ್ಚು ನಗದು ಹಾಗೂ 1 ಕೆ.ಜಿಗೂ ಅಧಿಕ ಚಿನ್ನ ಆಭರಣ ಹಾಗೂ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.



