ದಾವಣಗೆರೆ: ಹಿಂದೂ ಮಹಾ ಗಣಪತಿ 6ನೇ ವರ್ಷದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಹಾಗೂ ಬೃಹತ್ ಶೋಭಾಯಾತ್ರೆ ನಗರದಲ್ಲಿಂದು ಅದ್ಧೂರಿಯಾಗಿ ಜರುಗಿತು. ಈ ಅದ್ಧೂರಿ ಮರೆವಣಿಗೆಯಲ್ಲಿ ಬೃಹತ್ ಜನ ಸಾಗರವೇ ಹರಿದು ಬಂದಿತ್ತು. ಯುವ ಸಮೂಹ ಡಿಜೆ ಸೌಂಡ್ ಗೆ ಕುಣಿದು ಸಂಭ್ರಮಿಸಿದರು. ಶೋಭಾಯಾತ್ರೆ ಹಿನ್ನೆಲೆ ನಗರದೆಲ್ಲೆಡೆ ಕೇಸರಿ ಧ್ವಜಗಳಿಂದ ಅಲಂಕರಿಸಲಾಗಿತ್ತು.
ನಗರದ ಹೈಸ್ಕೂಲ್ ಮೈದಾನದಿಂದ ಶೋಭಾಯಾತ್ರೆಗೆ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್,ಸಂಸದ ಜಿ.ಎಂ ಸಿದ್ದೇಶ್ವರ್, ಮಾಜಿ ಸಚಿವ ಎಸ್.ಎ ರವೀಂದ್ರನಾಥ್, ಕಣ್ವಕುಪ್ಪಿ ಗವಿಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಸುಮಾರು ಐದು ಡಿಜೆಗಳು ಮೆರುಗು ನೀಡಿದ್ದು ಡಿಜೆ ಸದ್ದಿಗೆ ಯುವಸಮೂಹ ಸಖತ್ ಸ್ಟೆಪ್ ಹಾಕಿದರು. ವಿಶೇಷವಾಗಿ ಮಹಿಳೆಯರಿಗಾಗಿ ಮೀಸಲಿಟ್ಟಿದ್ದ ಡಿಜೆ ಮೆರವಣಿಗೆಗೆ ಮತ್ತೊಷ್ಟು ಮೆರುಗು ತಂದಿತ್ತು.
ಬೃಹತ್ ಶೋಭಾಯಾತ್ರೆ ಎಲ್ಲೆಲ್ಲೋ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದು, ಬೃಹತ್ ಗಾತ್ರದ ಪ್ಲೆಕ್ಸ್, ಬಂಟಿಂಗ್ಸ್ ನಿಂದಾಗಿ ಇಡೀ ದಾವಣಗೆರೆ ಕೇಸರಿಮಯವಾಗಿತ್ತು. ನಾಸಿಕ್ ಡೋಲು, ಡೊಳ್ಳು, ಚಂಡೆಮದ್ದಳೆ, ನಂದಿಕೋಲು, ಸಮ್ಮಾಳ, ಗೊಂಬೆಕುಣಿತ, ಸೋಮನ ಕುಣಿತ, ಪೂಜಾಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರುಗು ತಂದಿದ್ದವು. ನಾಡಿನಸಂಸ್ಕೃತಿ, ಸಂಪ್ರದಾಯ ವೈಭವ ಬಿಂಬಿಸುವ ರೂಪಕ, ಮಹಾನ್ ದಾರ್ಶನಿಕರು, ಸಂತರ ಭಾವಚಿತ್ರಗಳ ಪ್ರದರ್ಶನ ನಡೆಯಿತು. ನಗರದ ಅಕ್ಕಮಹಾದೇವಿ ರಸ್ತೆ, ಜಯದೇವ ವೃತ್ತ, ಪಿಬಿ ರಸ್ತೆ, ಹಳೇ ಬಸ್ ನಿಲ್ದಾಣ, ಅರಸು ಕ್ರಾಸ್,ಮಹಾನಗರ ಪಾಲಿಕೆ, ರಾಣಿ ಚೆನ್ನಮ್ಮ ವೃತ್ತ, ಈದ್ಗಾ ಮೈದಾನ, ಮದೀನ ಮಸೀದಿ, ಕೋರ್ಟ್ ವೃತ್ತದ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತ ತಲುಪಿದ ನಂತರ ಶೋಭಾಯಾತ್ರೆ ಕೊನೆಯಾಗಲಿದೆ.
ಶೋಭಾಯಾತ್ರೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 6 ರಿಂದ ರಾತ್ರಿ 12ಗಂಟೆಯವರೆಗೂ ಮದ್ಯಮಾರಾಟ ನಿಷೇಧಿಸಲಾಗಿದೆ. ನಗರದ ಎಲ್ಲಾ ವೃತ್ತಗಳಲ್ಲಿ ಬಿಗಿ ಪೋಲೀಸ್ ಭದ್ರತೆ ಒದಗಿಸಲಾಗಿದೆ. ಕ್ಷಿಪ್ರ ಕಾರ್ಯಪಡೆ,ಡಿಎಆರ್ ತುಕಡಿಗಳು,ಕೆಎಸ್ ಆರ್ ಪಿ ತುಕಡಿಗಳಿಂದ ಬಿಗಿ ಭದ್ರತೆ ಒದಗಿಸಲಾಗಿತ್ತು.ಮರೆವಣಿಗೆ ವೇಳೆ ಮಾರ್ಗ ಮಧ್ಯೆ ವಿವಿಧ ಸಂಘಟನೆಗಳು ಆಹಾರ, ನೀರು, ಮಜ್ಜಿಗೆ ಹಾಗೂ ಪಾನಕಗಳನ್ನು ವಿತರಿಸಿದರು.



