ದಾವಣಗೆರೆ: ಜೆಜೆಎಂ ವೈದ್ಯಕೀಯ ಕಾಲೇಜಿನ ರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಸುರೇಶ್ ಹನಗವಾಡಿ ಅವರು ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಸ್ಥಾಪಿಸಿ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಯಲ್ಲಿ ಹಿಮೋಫಿಲಿಯಾ ರೋಗಿಗಳ ಆರೈಯಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಕೇಂದ್ರ ಸರ್ಕಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗಲ ಘೋಷಿಸಿದೆ.
ಸ್ವತಃ ಹಿಮೋಫಿಲಿಯಾ ಬಾಧಿತರಾಗಿರುವ ಡಾ. ಸುರೇಶ್ ಹನಗವಾಡಿ ತಮ್ಮಂತೆಯೇ ಬೇರೆಯವರು ಸಮಸ್ಯೆಗೆ ತುತ್ತಾಗಬಾರದು ಮಹತ್ವದ ಉದ್ದೇಶದಿಂದ ದಾವಣಗೆರೆಯಲ್ಲಿ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ (1989-90) ಪ್ರಾರಂಭಿಸುವ ಮೂಲಕ ಹಿಮೋಫಿಲಿಯಾ(ಕುಸುಮರೋಗ) ಬಾಧಿತರಿಗೆ ಸಕಾಲಿಕ ಚಿಕಿತ್ಸೆ ನೀಡುತ್ತಿದ್ದಾರೆ.ಸುರೇಶ್ ಹನಗವಾಡಿ ಅವರಿಗೆ ಈಗಾಗಲೇ ಕೇಂದ್ರ ಸರ್ಕಾರದ ಶ್ರೇಷ್ಠ ದಿವ್ಯಾಂಗಜನ (2024), ರಾಜ್ಯೋತ್ಸವ ಪ್ರಶಸ್ತಿ (2021) ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗೌರವಗಳಿಗೆ ಭಾಜನರಾಗಿದ್ದಾರೆ.
ಹಿಮೊಫಿಲಿಯಾ ರಕ್ತಕ್ಕೆ ಸಂಬಂಧಿಸಿದ ಒಂದು ಅನುವಂಶಿಕ ಕಾಯಿಲೆಯಾಗಿದ್ದು, ರಕ್ತಸ್ರಾವ ಆದಾಗ ರಕ್ತವು ಹೆಪ್ಪುಗಟ್ಟುವ ಗುಣವನ್ನು ಕಳೆದುಕೊಳ್ಳುತ್ತದೆ. ರಕ್ತದಲ್ಲಿ ಹೆಪ್ಪುಗಟ್ಟುವ ಧಾತುಗಳು ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಕನ್ನಡದಲ್ಲಿ ಈ ರೋಗಕ್ಕೆ ಕುಸುಮ ರೋಗ ಎಂದು ಕರೆಯಲಾಗುತ್ತದೆ. ಅತಿಯಾದ ರಕ್ತಸ್ರಾವ, ಕೀಲುಗಳಲ್ಲಿ ಊತ ಮತ್ತು ಆಂತರಿಕ ರಕ್ತಸ್ರಾವದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
45 ವರ್ಷಗಳಿಂದ ಅಧ್ಯಯನ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಡಾ.ಸುರೇಶ್ ಹನಗವಾಡಿ ವೈದ್ಯಕೀಯ ಕಾಲೇಜಿನಲ್ಲಿ ಹಲವು ವರ್ಷಗಳ ಕಾಲ ಫೆಥಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.
ದೇಶದಲ್ಲಿಯೇ ಹಿಮೋಫಿಲಿಯಾ, ತಲಸ್ಸೇಮಿಯಾ ಸೇರಿದಂತೆ ವಿರಳ ರಕ್ತಸ್ರಾವ ರೋಗಗಳಿಗೆ ಸಂಬಂಧಿಸಿದಂತೆ ಅತ್ಯುತ್ತಮ ಚಿಕಿತ್ಸಾ ಕೇಂದ್ರವನ್ನು ದಾವಣಗೆರೆ ನಗರದಲ್ಲಿ ಸ್ಥಾಪಿಸಿ ಅನ್ಯ ರಾಜ್ಯದ ರೋಗಿಗಳು ಒಳಗೊಂಡಂತೆ ಸಾವಿರಾರು ರೋಗಿಗಳಿಗೆ ಉತ್ಕೃಷ್ಟ ಗುಣಮಟ್ಟದ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ.ದೇಶದ ಖ್ಯಾತ ಗಾಯಕ ಡಾ| ಎಸ್ಪಿ. ಬಾಲಸುಬ್ರಹ್ಮಣ್ಯಂ ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಮಹಾ ಪೋಷಕರಾಗಿದ್ದ ಸಂಗೀತ ಕಾರ್ಯಕ್ರಮದ ಮೂಲಕ ಅರ್ಥಿಕ ಸಹಾಯ ಮಾಡಿದ್ದಾರೆ. ಎಸ್ ಪಿಬಿ ಅವರೇ ಹಿಮೋಫಿಲಿಯಾ ಕಟ್ಟಡದ ಉದ್ಘಾಟನೆ ನೆರವೇರಿಸುವುದರ ಜೊತೆಗೆ ದಾವಣಗೆರೆಯ ಶ್ರೀ ಶಿವಯೋಗಿ ಮಂದಿರ ಆವರಣದಲ್ಲಿ ಹಿಮೋಫಿಲಿಯಾ ಬಾಧಿತರ ನೆರವಾರ್ಥ ಸಂಗೀತ ಸಂಜೆ ಕಾರ್ಯಕ್ರಮ ಸಹ ನಡೆಸಿಕೊಟ್ಟಿದ್ದರು.
ಡಾ. ಸುರೇಶ್ ಹನಗವಾಡಿ ಅವರ ಸೇವೆಗೆ ಈಗಾಗಲೇ ಹತ್ತಾರು ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳು ಸಂದಿವೆ. ಅಂಗವಿಕಲತೆಯನ್ನು ತಡೆಗಟ್ಟುವ ಕಾರ್ಯದಲ್ಲಿ ನಿರತರಾಗಿರುವ ಹನಗವಾಡಿಯವರಿಗೆ ಕಳೆದ ವರ್ಷ ಕೇಂದ್ರ ಸರ್ಕಾರದ 2024 ನೆ ಸಾಲಿನ ವಿಕಲಚೇತನರ ಸಬಲೀಕರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರು.



