ದಾವಣಗೆರೆ: ಸಂತ ಪೌಲರ ಶೈಕ್ಷಣಿಕ ಸಂಸ್ಥೆ ದಾವಣಗೆರೆಯ ಹಳೆ ವಿದ್ಯಾರ್ಥಿಗಳ ಸಂಘವು ಸಂಸ್ಥೆಯ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ಎಸ್.ಎಸ್. ಕೇರ್ ಟ್ರಸ್ಟ್ನ ಸಹಯೋಗದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇದೇ ಜುಲೈ 8 ಮತ್ತು 9 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಸಂತ ಪೌಲರ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ಏರ್ಪಡಿಸಿದೆ.
ಶಿಬಿರವನ್ನು ಎಸ್.ಎಸ್. ಕೇರ್ ಟ್ರಸ್ಟ್ ಟ್ರಸ್ಟಿ ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಸದಸ್ಯೆ ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸುವರು. ಶಿಬಿರದಲ್ಲಿ ಜೆ.ಜೆ.ಎಂ. ಆಸ್ಪತ್ರೆ ಮತ್ತು ಎಸ್.ಎಸ್. ಹೈಟೆಕ್ ಆಸ್ಪತ್ರೆಯ ಪರಿಣಿತ ವೈದ್ಯರುಗಳಿಂದ ಸಾಮಾನ್ಯ ಆರೋಗ್ಯ ತಪಾಸಣೆ, ಉಚಿತ ರಕ್ತದಲ್ಲಿನ ಸಕ್ಕರೆ ಪರೀಕ್ಷೆ ಮತ್ತು ರಕ್ತದೊತ್ತಡ ತಪಾಸಣೆ, ಮಧುಮೇಹ ರೋಗಿಗಳಿಗೆ ಸಮಾಲೋಚನೆ, ರೆಟಿನೋಪತಿ ಮತ್ತು ಪಾದದ ಸಮಸ್ಯೆಗಳಿಗೆ ತಪಾಸಣೆ. ಮಧುಮೇಹ ಹೊಂದಿರುವ ರೋಗಿಗಳಿಗೆ ಚಿಕಿತ್ಸೆ, ರಕ್ತದೊತ್ತಡ ರೋಗಿಗಳೊಂದಿಗೆ ಸಮಾಲೋಚನೆ ಮತ್ತು ಅಗತ್ಯವಿರುವಲ್ಲಿ ಇಸಿಜಿ, ಸ್ಕ್ರೀನಿಂಗ್. ಸ್ತ್ರೀ ರೋಗ ತಜ್ಞರಿಂದ ಉಚಿತ ಸಮಾಲೋಚನೆ, ಸ್ತನ ಗಡ್ಡೆಗಾಗಿ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಯವರೆಗೆ ಚಿಕಿತ್ಸೆ, ಕ್ಯಾನ್ಸರ್ ಸ್ಕ್ರೀನಿಂಗ್ ಮತ್ತು ಶಸ್ತ್ರ ಚಿಕಿತ್ಸೆಯವರೆಗೆ ಚಿಕಿತ್ಸೆ, ಕ್ಯಾಟ್ರಾಕ್ಟ್ ಮತ್ತು ಗ್ಲುಕೋಮಾ ಸ್ಟೀನಿಂಗ್, ಬಾಯಿಯ ಆರೋಗ್ಯ ಸಮಸ್ಯೆಗಳಿಗೆ ತಪಾಸಣೆ ನಡೆಯಲಿದೆ.
ಸಾಮಾನ್ಯ ಸಮಸ್ಯೆಗಳಿಗೆ ಸೀನಿಂಗ್ ಮತ್ತು ಚಿಕಿತ್ಸೆಯನ್ನು ಉಚಿತವಾಗಿ ನಡೆಯಲಿದೆ. ಅವಶ್ಯವಿರುವ ರೋಗಿಗಳು ಹೆಚ್ಚಿನ ಚಿಕಿತ್ಸೆಗೆ ಎಸ್.ಎಸ್. ಕೇರ್ನ ಉಚಿತ ವೈದ್ಯಕೀಯ ಕಾರ್ಡ್ ಪಡೆಯಬಹುದಾಗಿದೆ. ಶಿಬಿರದ ಸದುಪಯೋಗವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಸಂತ ಪೌಲರ ಶೈಕ್ಷಣಿಕ ಸಂಸ್ಥೆಯ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರು ಕೋರಿದ್ದಾರೆ.



