ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ನಿನ್ನೆ (ಮೇ 20) ತಡ ರಾತ್ರಿ ಮತ್ತು ಇಂದು (ಮೇ 21) ಮಧ್ಯಾಹ್ನ ಜೋರು ಮಳೆಯಾಗಿದೆ. ಮುಂಗಾರು ಪೂರ್ವ ಮಳೆಯು ಕಳೆದ ಮೂರ್ನಾಲ್ಕು ದಿನದಿಂದ ಅಬ್ಬರಿಸುತ್ತಿದ್ದು, ಹಳ್ಳಿ- ಕೊಳ್ಳಗಳಿಗೆ ಜೀವ ಕಳೆ ಬಂದಿದೆ. ಇದರಿಂದ ಬೇಸಿಗೆ ಬಿಸಿಲಿನಿಂದ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.
ತಡರಾತ್ರಿ ಆರಂಭವಾದ ಮಳೆ ಎರಡು ಗಂಟೆಗೂ ಹೆಚ್ಚು ಹೊತ್ತು ಸುರಿದಿದೆ. ಇಂದು ಸಹ ಮಧ್ಯಾಹ್ನವೇ ಒಂದು ಗಂಟೆಗೆಗೂ ಹೆಚ್ಚು ಸಮಯ ಗುಡುಗು-ಸಿಡಿಲು ಸಹಿತ ಜೋರು ಮಳೆಯಾಗಿದೆ. ಹರಿಹರ ತಾಲ್ಲೂಕಿನ ಕೊಂಡಜ್ಜಿ, ಕೆಂಚನಹಳ್ಳಿ, ಸಾರಥಿ, ಕುರುಬರಹಳ್ಳಿ, ಗುತ್ತೂರು, ಬೆಳ್ಳೂಡಿ, ಭಾನುಹಳ್ಳಿ, ಹೊಳೆಸಿರಿಗೆರೆ, ಮಲೇಬೆನ್ನೂರು ಭಾಗದಲ್ಲಿ ಉತ್ತಮ ಮಳೆಯಾಗಿದೆ. ನದಿ, ಕೆರೆ, ಹಳ್ಳ, ಕೊಳ್ಳಗಳಲ್ಲಿ ನೀರು ಹರಿಯುತ್ತಿದ್ದು, ರೈತರಲ್ಲಿ ಉತ್ತಮ ಮುಂಗಾರು ಭರವಸೆ ಮೂಡಿಸಿದೆ.
ಮಳೆ ವಿವರ: ಹರಿಹರ ನಗರ- 3 ಸೆಂ.ಮೀ ಕೊಂಡಜ್ಜಿ- 2.ಸೆಂ.ಮೀ, ಹೊಳೆಸಿರಿಗೆರೆಯಲ್ಲಿ 3.3 ಸೆಂ.ಮೀ, ಮಲೆಬೆನ್ನೂರು 1.7, ಸೆಂ.ಮೀ ಸೇರಿ ಒಟ್ಟಾರೆ ತಾಲ್ಲೂಕಿನಲ್ಲಿ 10 ಸೆಂ.ಮೀ ಮಳೆ ದಾಖಲಾಗಿದೆ. ಹದ ಮಳೆಯಿಂದ ಕೃಷಿ ಕಾರ್ಯಕ್ಕೆ ಅನುವು ಮಾಡಿ ಕೊಟ್ಟಿದೆ. ಅಡಿಕೆ , ತೆಂಗು ಬೆಳೆಗಳಿಗೆ ಹಸಿ ಮಳೆಯಾಗಿದೆ.



